ಉಳ್ಳಾಲ: ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಅಪಾರ ಹಾನಿ
ಉಳ್ಳಾಲ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕೃಷ್ಣ ನಗರ ಜಾನಕಿ ಅವರ ಮನೆ ಹಾನಿಯಾಗಿದೆ. ಮನೆಯ ಹೆಂಚು ಹಾರಿ ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.
ಸುಂದರಿ ಬಾಗ್ ಎಂಬಲ್ಲಿ ಲೀಲಾವತಿ ಅವರ ಮನೆ ಭಾಗಶಃ ಹಾನಿಯಾಗಿದೆ. ಗೋಡೆ ಕುಸಿದು ಮಳೆ ನೀರು ಪಾಲಾಗಿದೆ. ಕೆರೆಬೈಲ್ ಗುಡ್ಡೆಯಲ್ಲಿ ಕ್ರಿಸ್ತಿನ ಡಿಸೋಜ ರವರ ಮನೆಯ ಶೀಟ್ ಹಾರಿ ಹೋಗಿ ಸಣ್ಣ ಪುಟ್ಟ ಹಾನಿಯಾಗಿದೆ. ಕಲ್ಲಾಪು ಬಳಿ ತೋಡಿನಲ್ಲಿ ನೀರು ತುಂಬಿದ ಪರಿಣಾಮ ಎರಡು ಮನೆಗಳ ಆವರಣ ಗೋಡೆ ಒಳಗೆ ನೀರು ನುಗ್ಗಿದೆ.
ಘಟನಾ ಸ್ಥಳಕ್ಕೆ ನಗರ ಸಭೆ ಅಧ್ಯಕ್ಷ ಚಿತ್ರ ಕಲಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಕಮಿಷನರ್ ರಾಯಪ್ಪ ಗ್ರಾಮಕರಣಿಕ ಪ್ರಮೋದ್, ಸಹಾಯಕ ನವನೀತ್ ,ಫೆರ್ಮನ್ನೂರು ಗ್ರಾಮಕರಣಿಕ ಶ್ವೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಡ್ಕ ರೈಲ್ವೆ ಕ್ರಾಸಿಂಗ್ ಬಳಿ ಗಾಳಿ ಮಳೆಗೆ ಮರವೊಂದು ಧರೆಗುರುಳಿದ್ದು ಇದರಿಂದ ಏಳು ವಿದ್ಯುತ್ ಕಂಬ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿದ್ಯುತ್ ಸಂಪರ್ಕ ಕೆಟ್ಟು ಹೋಗಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ವಾಣಿ, ಅರಣ್ಯಾಧಿಕಾರಿ ಗಳು, ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮರ ತೆರವುಗೊಳಿಸಿ ದುರಸ್ತಿ ಕಾರ್ಯ ದಲ್ಲಿ ನಿರತರಾಗಿದ್ದಾರೆ.