ಅಕ್ರಮವಾಗಿ ಸಂಗ್ರಹಿಸಿಟ್ಟ ಆರೋಪ: 800 ಮೆಟ್ರಿಕ್ ಟನ್ ಮರಳು ವಶ
ಕಾಪು, ಜೂ.14: ಕಾಪು ತಾಲೂಕಿನ ತೆಂಕ ಗ್ರಾಮ ಎರ್ಮಾಳು ಗುಡ್ಡೆಮನೆ ಎಂಬಲ್ಲಿ ಮೂರು ಕಡೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಲ್ಲಿ 800 ಮೆಟ್ರಿಕ್ಟನ್ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಿದ್ದ ಮರಳಿನ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಆಗ ಬೃಹತ್ ಪ್ರಮಾಣದ ಮರಳು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಸ್ಥಳೀಯ ಗಿರೀಶ್ ಎಂಬ ವ್ಯಕ್ತಿ ಮರಳು ಅಕ್ರಮವಾಗಿ ಮರಳು ದಾಸ್ತಾನು ಇರಿಸಿರುವುದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಕಾನೂನು ಕ್ರಮದಂತೆ ಖಾಸಗಿ ದೂರು ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಪು ತಹಸೀಲ್ದಾರ್ ಪ್ರತಿಭಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಸಂಧ್ಯಾ, ಕಾಪು ಆರ್ಐ ಸುಧೀರ್ ಶೆಟ್ಟಿ, ಗ್ರಾಮಕರಣಿಕ ಶ್ಯಾಮ ಸುಂದರ್ ಕಾರ್ಯಾಚರಣೆ ನಡೆಸಿದ್ದಾರೆ.