ಹುದ್ದೆ ಭರ್ತಿ ಮಾಡಿ

Update: 2021-06-14 18:02 GMT

 ಮಾನ್ಯರೇ,

ಸಾರ್ವತ್ರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗಾಗಿ ಸರಕಾರದಿಂದ ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದ್ದರೂ, ಕನಿಷ್ಠ ಪ್ರಾಥಮಿಕ ವೈದ್ಯಕೀಯ ಸೌಲಭ್ಯವು ಇನ್ನೂ ಹೆಚ್ಚಿನ ಗ್ರಾಮಗಳನ್ನು, ವ್ಯವಸ್ಥೆಯ ತಳಹಂತವನ್ನೂ ತಲುಪಿಲ್ಲವೆಂಬುದು ಕಠೋರ ಸತ್ಯ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಹಳ್ಳಿಗಳೆಡೆ ವ್ಯಾಪಕವಾಗಿ ಹಬ್ಬಿದ ಸೋಂಕನ್ನು ನಿರ್ವಹಿಸುವಲ್ಲಿ, ನಿಯಂತ್ರಿಸುವಲ್ಲಿ ಸಮರ್ಪಕವಾದ ವ್ಯವಸ್ಥೆಯಿಲ್ಲದೆ, ಪಡುತ್ತಿರುವ ಪಡಿಪಾಟಲು ಇದಕ್ಕೆ ಜ್ವಲಂತ ಸಾಕ್ಷಿ. ಈ ಸಂದರ್ಭದಲ್ಲಿ ಆಗುತ್ತಿರುವ ಸಾವು ನೋವುಗಳು ಮರೆಯಲಾಗದ ಘೋರ ಇತಿಹಾಸವನ್ನು ಬರೆದುಬಿಟ್ಟಿರುವುದು ಇನ್ನಾದರೂ ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕಿರುವ ತುರ್ತನ್ನು ಸರಕಾರದ ಮುಂದಿರಿಸಿದೆ. ಕಳೆದೊಂದು ದಶಕದಿಂದ ಅತ್ಯಂತ ಕಡಿಮೆ ಸಂಭಾವನೆ ಮತ್ತು ಸೌಲಭ್ಯ ಪಡೆಯುತ್ತಿದ್ದರೂ ಪ್ರತಿಕೂಲ ಸಂದರ್ಭ, ಸನ್ನಿವೇಶಗಳಲ್ಲಿ ಕೂಡ ವಿಕೇಂದ್ರೀಕೃತ ವ್ಯವಸ್ಥೆಯ ತಳಮಟ್ಟಕ್ಕೆ ಆರೋಗ್ಯಸೇವೆಯನ್ನು ತಲುಪಿಸುತ್ತಿರುವವರು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಇವರ ಹುದ್ದೆಗಳನ್ನು ಭರ್ತಿಗೊಳಿಸದಿರುವುದು, ಜನರನ್ನು ಆರೋಗ್ಯದ ಹಕ್ಕಿನಿಂದ ವಂಚಿತಗೊಳಿಸುವಂತದ್ದಾಗಿದೆ. ಸದ್ಯ ರಾಜ್ಯದಲ್ಲಿ 65,911 ಅಂಗನವಾಡಿ ಕಾರ್ಯಕರ್ತೆಯರು, 62,580 ಸಹಾಯಕಿಯರು, 42,000 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯದಲ್ಲಿ 1,488 ಅಂಗನವಾಡಿ ಕಾರ್ಯಕರ್ತೆಯರು ಮತ್ತು 2,811 ಸಹಾಯಕಿಯರ ಹುದ್ದೆಗಳು ಖಾಲಿ ಇರುವುದರಿಂದ ಅಪೌಷ್ಟಿಕತೆ ನಿವಾರಣೆ ಹಾಗೂ ನಿರ್ವಹಣೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವುದರಿಂದ, ತಕ್ಷಣವೇ ಈ ಹುದ್ದೆಗಳನ್ನು ಭರ್ತಿ ಮಾಡಿಸಬೇಕೆಂದು ಪೀಠಕ್ಕೆ ಸಲಹೆ ನೀಡಿದೆ. ಇದು ಸ್ವಾಗತಾರ್ಹವಾಗಿದ್ದು, ತಕ್ಷಣವೇ ಅನುಷ್ಠಾನವಾಗಬೇಕು. ಇದೇ ರೀತಿ ಜನಸಂಖ್ಯೆ ಆಧಾರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಆಶಾಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಇವನ್ನೂ ತಕ್ಷಣವೇ ಭರ್ತಿ ಮಾಡಲು ಸರಕಾರ ಕ್ರಮಕೈಗೊಳ್ಳಬೇಕಿದೆ. ತನ್ಮೂಲಕ ಗ್ರಾಮೀಣ ಮತ್ತು ವ್ಯವಸ್ಥೆಯ ತಳಮಟ್ಟಕ್ಕೆ ಆರೋಗ್ಯ ಸೌಲಭ್ಯವನ್ನು ಖಾತ್ರಿಗೊಳಿಸಬೇಕು.

Writer - -ರೂಪಾ ಹಾಸನ

contributor

Editor - -ರೂಪಾ ಹಾಸನ

contributor

Similar News