ಜನರ ರಕ್ಷಣೆಯ ‘ಖಾಸಗೀಕರಣ’

Update: 2021-06-15 19:30 GMT

ಕೊರೋನ ಕಾರಣ ಲಾಕ್‌ಡೌನ್ ಶುರುವಾದಂದಿನಿಂದ ದಿನದಿನದ ದುಡಿಮೆ ನಂಬಿ ಬದುಕುವ ಸಮುದಾಯಗಳು ಹಸಿವನ್ನು ನೀಗಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿವೆ. ಇದರಲ್ಲಿ ಅಲೆಮಾರಿ/ಅರೆ ಅಲೆಮಾರಿ/ಆದಿವಾಸಿ/ದಲಿತ/ದಮನಿತ/ಕೆಳವರ್ಗಗಳ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ತನ್ನ ಪ್ರಜೆಗಳು ಹಸಿವಿನಿಂದ ಬಳಲದಂತೆ ಕಾಪಾಡುವುದು ಪ್ರಜಾಪ್ರಭುತ್ವ ಸರಕಾರದ ಮುಖ್ಯ ಕರ್ತವ್ಯ. ಹೀಗಾಗಿಯೇ ಯುಪಿಎ ಸರಕಾರ 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿತ್ತು. 2011 ರಿಂದ ಈ ಕಾಯ್ದೆ ಜಾರಿಯಾಗದಂತೆ ತಡೆದ ಬಿಜೆಪಿ ಸರಕಾರ ಇದೀಗ ಕೇಂದ್ರದಲ್ಲಿದೆ. ಹೀಗಿರುವಾಗ ಈ ಕಾಯ್ದೆಯಡಿ ಜನಸಾಮಾನ್ಯರ ಹಸಿವನ್ನು ಈ ಸರಕಾರ ಹೇಗೆ ನೀಗಿಸುತ್ತಿದೆ ಎಂದು ಪರಿಶೀಲಿಸಿದರೆ ತೀವ್ರ ನಿರಾಸೆಯಾಗುತ್ತದೆ. ಇದರ ವೈಫಲ್ಯದಿಂದಾಗಿಯೇ ಇಂದು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಜನರಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ.

ಯಾರಾದರೇನು ಜನರ ಹಸಿವು ನೀಗಿಸಿದರೆ ಸಾಕಲ್ಲವೇ ಎನ್ನುವ ಪ್ರಶ್ನೆಯೊಂದು ದುತ್ತನೆ ಎದುರಾಗುತ್ತದೆ. ಆದರೆ ಪ್ರಜಾಪ್ರಭುತ್ವ ಸರಕಾರವು ಜನರ ಹಸಿವನ್ನು ನೀಗಿಸಿದರೆ ಅದು ಅವರ ಹಕ್ಕಿನ ಭಾಗ. ಜನರದೇ ತೆರಿಗೆ ಹಣದ ಫಲ. ಹಾಗಾಗಿ ಜನಸಾಮಾನ್ಯರು ಯಾರದೋ ಮರ್ಜಿಗೆ ಒಳಗಾಗುವುದು ತಪ್ಪುತ್ತದೆ. ಜನರ ಕಷ್ಟದಲ್ಲಿ ಸರಕಾರ ನೆರವಾದರೆ, ಒಂದು ಪ್ರಜಾಪ್ರಭುತ್ವ ಸರಕಾರದ ಬಗ್ಗೆಯೂ ಜನರಲ್ಲಿ ವಿಶ್ವಾಸ ಗಟ್ಟಿಯಾಗುತ್ತದೆ. ಆದರೆ ಇಂದು ಜನರ ಸಂಕಷ್ಟಗಳನ್ನು ನೀಗಿಸಲು ಖಾಸಗಿ ವಲಯ ಮುಂದೆ ಬರುತ್ತಿದೆ. ಪ್ರತಿದಿನ ಆಹಾರದ ಕಿಟ್ ಪಡೆಯುವ ಜನರ ದೀನತೆಯ ಫೋಟೊಗಳು ಹಂಚಿಕೆಯಾಗುತ್ತಿವೆ. ಬಹುತೇಕ ಫೋಟೊಗಳಲ್ಲಿ ಆಹಾರದ ಕಿಟ್ ಪಡೆಯುವವರ ಅಸಹಾಯಕತೆಯೂ, ಆಹಾರದ ಕಿಟ್ ಕೊಡುವವರ ಉತ್ತಮ ಸ್ಥಿತಿ ಕಣ್ಣಿಗೆ ರಾಚುತ್ತದೆ. ಇದು ದೇಶದ ವೈರುಧ್ಯ. ಇದರಲ್ಲಿಯೇ ಕೆಲವರು ತಮ್ಮ ಬ್ಯಾಲೆನ್ಸ್ ಶೀಟ್ ಪೂರ್ತಿ ಮಾಡಿಕೊಳ್ಳುತ್ತಿದ್ದಾರೆ.

ಭ್ರಷ್ಟತೆಯಿಂದಲೂ, ನೀಚತನದಿಂದಲೂ ಜನರ ಪಾಲಿನ ಹಣ ಸಂಪತ್ತು ಅವಕಾಶಗಳನ್ನು ದೋಚಿದವರು, ಅದರ ಬಿಡಿಗಾಸಿನ ಪಾಲನ್ನು ಜನರಿಗೆ ನೀಡಿ ಅನ್ಯಾಯ ಅಕ್ರಮಗಳ ಕೆಡುಕಿನ ಇಮೇಜನ್ನು ಒಳಿತನ್ನಾಗಿಸಿಕೊಳ್ಳುವ ಸ್ಪರ್ಧೆ ಏರ್ಪಟ್ಟಿದೆ. ಈ ಒಳಿತಿನ ಇಮೇಜಿಗಾಗಿಯೇ ಕಿಟ್ ವಿತರಣೆಯ ಸಾವಿರಾರು ಫೋಟೊಗಳು ದಿನನಿತ್ಯ ಹಂಚಿಕೆಯಾಗುತ್ತಿವೆ. ಇಲ್ಲಿಯೂ ಒಂದು ಸಾವಿರ ಖರ್ಚು ಮಾಡಿ ಹತ್ತು ಸಾವಿರದ ಲೆಕ್ಕ ತೋರಿಸುವವರ ಸಂಖ್ಯೆಯೂ ದೊಡ್ಡದಿವೆ. ಇದರಲ್ಲಿ ಕಪ್ಪುಹಣವನ್ನು ಬಿಳಿಮಾಡಿಕೊಳ್ಳುವ ವೈಯಕ್ತಿಕ ಲಾಭ ಮತ್ತು ದಾನಧರ್ಮ ಮಾಡಿದ ಒಳ್ಳೆಯತನದ ಜನಾಭಿಪ್ರಾಯ ಹೀಗೆ ಏಕಕಾಲಕ್ಕೆ ಎರಡು ಬಗೆಯ ಲಾಭಗಳಿವೆ. ಈ ಗ್ರಹಿಕೆಗೆ ವಿರುದ್ಧವಾದ ಬೆರಳೆಣಿಕೆಯ ಅಪವಾದಗಳು ಇರಬಹುದು.

ಬಹುಪಾಲು ನ್ಯಾಯಯುತವಾಗಿ ದುಡಿದವರಲ್ಲಿ ಹೆಚ್ಚುವರಿ ಹಣ ಅಥವಾ ಸಂಪತ್ತಿನ ಸಂಗ್ರಹ ಕಡಿಮೆ ಅಥವಾ ಅವರ ಜೀವನಾವಶ್ಯಕ ಅಗತ್ಯದಷ್ಟಿರುತ್ತದೆ. ಅಂತಹವರು ಹೀಗೆ ಜನರಿಗೆ ಸಹಾಯ ಮಾಡಿ ಫೋಟೊ ತೆಗೆಸಿಕೊಳ್ಳಲು ಆಗುವುದಿಲ್ಲ. ಅಂತೆಯೇ ತಮ್ಮ ನ್ಯಾಯಯುತ ದುಡಿಮೆಯಲ್ಲಿ ಒಂದಷ್ಟು ಸಹಾಯ ಮಾಡಿದರೂ ಅದು ಯಾರಿಗೂ ತಿಳಿಯದಿರಲಿ ಎಂದು ಬಯಸುವವರು ಹೆಚ್ಚು. ಯಾಕೆಂದರೆ ಅಂತಹವರಿಗೆ ಪ್ರಚಾರದ ಅಗತ್ಯವೂ ಇರುವುದಿಲ್ಲ. ಮನುಷ್ಯ ಸಹಜ ತೋರಿಕೆಯ ಬಯಕೆ ಇದ್ದರೂ, ದೊಡ್ಡ ದೊಡ್ಡ ಸಹಾಯಾರ್ಥಗಳ ಪ್ರಚಾರದ ಭರಾಟೆಯಲ್ಲಿ ತಮ್ಮ ಚಿಕ್ಕಪುಟ್ಟ ಸಹಾಯವನ್ನು ಹೇಳಿಕೊಳ್ಳುವುದೂ ಕಷ್ಟ. ಸಾಮಾನ್ಯವಾಗಿ ನ್ಯಾಯಯುತವಲ್ಲದ, ಕಾನೂನುಬಾಹಿರ ನಡೆಗಳಿಂದ ಜನರ ಪಾಲಿನ ಹಣ, ಸಂಪತ್ತನ್ನು ದೋಚಿದವರೂ ಇಂದು ಜನರ ಸಹಾಯಕ್ಕೆ ನಿಂತಿರುವ ಚಿತ್ರಗಳು ಕಾಣುತ್ತದೆ. ಇದರಲ್ಲಿ ಯಾರನ್ನಾದರೂ ನಿಮ್ಮ ಸಂಪತ್ತಿನ ಶೇ. ಎಷ್ಟು ಪಾಲು ಹೀಗೆ ಜನರಿಗೆ ಸಹಾಯ ಮಾಡಿದ್ದೀರಿ ಎಂದು ಕೇಳಿದರೆ, ಅವರು ಅಕಸ್ಮಾತ್ ಸತ್ಯಕ್ಕೆ ಹತ್ತಿರವಾದ ಉತ್ತರ ಕೊಟ್ಟರೆ ಈ ನೆರವಿನ ಆಳದಲ್ಲಿರುವ ಕ್ರೌರ್ಯ ಬಯಲಾಗುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಕೆಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜನರಿಗೆ ನೆರವು ನೀಡುವುದಕ್ಕಿಂತ, ನ್ಯಾಯಯುತವಾಗಿ ಸರಕಾರಕ್ಕೆ ಸಲ್ಲಬೇಕಾದ ನೂರಾರು ಕೋಟಿ ರೂಪಾಯಿ ತೆರಿಗೆ ಕಟ್ಟುವುದು ಜನತೆಯ ಹಿತದೃಷ್ಟಿಯಿಂದ ಹೆಚ್ಚು ಲಾಭಕರ.

ಕೆಲವು ಕಡೆಗಳಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ಆಯಾ ಭಾಗದ ಸರಕಾರೇತರ ಸಂಸ್ಥೆಗಳಲ್ಲಿಯೂ, ಸಿರಿವಂತ ಧನಿಕರಲ್ಲಿಯೂ, ರಾಜಕಾರಣಿಗಳಲ್ಲಿಯೂ ಮನವಿ ಮಾಡಿ, ಅಗತ್ಯವಿರುವ ಸಮುದಾಯಗಳಿಗೆ ನೆರವು ಕೊಡಿಸಲಾಗುತ್ತಿದೆ. ಇಲ್ಲಿ ಸರಕಾರ ತನ್ನ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ವರ್ಗಾಯಿಸುತ್ತಿದೆ. ಹೀಗೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಸ್ಪಂದಿಸಿದವರು ಮುಂದೆ ತಮಗೆ ಬೇಕಾದ ಸರಕಾರಿ ನೆರವನ್ನು ಇದೇ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ನಿರೀಕ್ಷಿಸುತ್ತಾರೆ. ಆಗ ಅವರು ನೆರವು ನೀಡಿದ ಖರ್ಚಿನ ಹತ್ತು ಪಟ್ಟು ಲಾಭ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಈ ಎಲ್ಲಾ ಕಾರಣಗಳಿಂದಾಗಿ ಇಂದು ಜನಸಾಮಾನ್ಯರು ಖಾಸಗಿಯವರತ್ತ ಕೈಚಾಚುತ್ತಿರುವ ಈ ದೀನ ಸ್ಥಿತಿಯು ಪ್ರಜಾಪ್ರಭುತ್ವ ಸರಕಾರದ ಅಧಃಪತನಕ್ಕೆ ಸಾಕ್ಷಿಯಾಗಿದೆ. ಇದರ ದೂರಗಾಮಿ ಪರಿಣಾಮವೆಂದರೆ, ಅಂತಿಮವಾಗಿ ಖಾಸಗೀಕರಣದ ಬಗ್ಗೆ ಜನರಲ್ಲಿ ಒಲವು ಮೂಡತೊಡಗುತ್ತದೆ.

Writer - ಅರುಣ್ ಜೋಳದಕೂಡ್ಲಿಗಿ

contributor

Editor - ಅರುಣ್ ಜೋಳದಕೂಡ್ಲಿಗಿ

contributor

Similar News