ಗಂಗಾನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ತೇಲಿ ಬಂದ ನವಜಾತ ಶಿಶು
Update: 2021-06-17 14:29 GMT
ಲಕ್ನೋ, ಜೂ.17: ಗಂಗಾನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ತೇಲಿಬಂದ ನವಜಾತ ಹೆಣ್ಣುಶಿಶುವನ್ನು ಅಂಬಿಗನೊಬ್ಬ ರಕ್ಷಿಸಿ ಮನೆಗೊಯ್ದ ಘಟನೆ ಉತ್ತರಪ್ರದೇಶದ ಗಾಝಿಪುರದಲ್ಲಿ ವರದಿಯಾಗಿದೆ. ಗಂಗಾ ನದಿಯಿಂದ ದಕ್ಕಿದ ಉಡುಗೊರೆ ಇದು ಎಂದು ಪರಿಗಣಿಸಿ ಮಗುವನ್ನು ಸಾಕುತ್ತೇನೆ ಎಂದು ಸ್ಥಳೀಯ ಅಂಬಿಗ ಗುಲ್ಲು ಚೌಧರಿ ಹೇಳಿದ್ದಾನೆ. ಶಿಶುವಿದ್ದ ಪೆಟ್ಟಿಗೆಯಲ್ಲಿ ದೇವರ ಫೋಟೊಗಳ ಜತೆ ಮಗುವಿನ ಜಾತಕದ ಪ್ರತಿಯನ್ನೂ ಇರಿಸಲಾಗಿತ್ತು ಎಂದು ಆತ ಹೇಳಿದ್ದಾನೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೆದ್ಯಕೀಯ ಪರೀಕ್ಷೆಯ ಮೂಲಕ ಮಗುವಿನ ಹೆತ್ತವರನ್ನು ಗುರುತಿಸಲು ಪ್ರಯತ್ನಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅಂಬಿಗನ ಕಾರ್ಯವನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ಮಗುವಿನ ಪಾಲನೆ ಪೋಷಣೆಗೆ ಸರಕಾರ ನೆರವಾಗಲಿದೆ. ಅಂಬಿಗನ ಕಾಳಜಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಸರಕಾರದ ಯಾವುದಾದರೊಂದು ಯೋಜನೆಯಲ್ಲಿ ಅವರಿಗೆ ನೆರವು ನೀಡಲಾಗುವುದು ಎಂದವರು ಟ್ವೀಟ್ ಮಾಡಿದ್ದಾರೆ.