ಕುಂಭಮೇಳದ ಅತೀದೊಡ್ಡ ಕೋವಿಡ್ ಪರೀಕ್ಷೆ ಹಗರಣವನ್ನು ಎಲ್ಐಸಿ ಏಜೆಂಟ್ ಓರ್ವರು ಬಯಲುಗೊಳಿಸಿದ್ದು ಹೇಗೆ ಗೊತ್ತೇ?

Update: 2021-06-18 11:50 GMT

ಹೊಸದಿಲ್ಲಿ,ಜೂ.18: ಉತ್ತರಾಖಂಡದ ಹೃಷಿಕೇಶದಲ್ಲಿ ಇತ್ತೀಚಿಗೆ ನಡೆದಿದ್ದ ಕುಂಭಮೇಳದಲ್ಲಿಯ ಕೋವಿಡ್ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ರಾಜ್ಯ ಸರಕಾರವು ಗುರುವಾರ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಈ ಹಗರಣವನ್ನು ಬಯಲುಗೊಳಿಸಿದ್ದು ಪಂಜಾಬಿನ ಫರೀದ್ ಕೋಟ್ ನಲ್ಲಿ ಎಲ್ಐಸಿ ಏಜೆಂಟ್ ಆಗಿರುವ ವಿಪನ್ ಮಿತ್ತಲ್. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಗೆ ತಾನು ಕಳುಹಿಸಿದ್ದ ಇ-ಮೇಲ್ ದೇಶದಲ್ಲಿಯೇ ಅತ್ಯಂತ ದೊಡ್ಡ ನಕಲಿ ಕೋವಿಡ್ ಪರೀಕ್ಷೆ ಹಗರಣವನ್ನು ಬಯಲಿಗೆಳೆಯುತ್ತದೆ ಎಂದು ಅವರು ಊಹಿಸಿಯೂ ಇರಲಿಲ್ಲ.

ಎ.22ರಂದು ‘ಕೋವಿಡ್-19 ಪರೀಕ್ಷೆಗಾಗಿ ನಿಮ್ಮ ಗಂಟಲುದ್ರವದ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗಿದೆ ’ಎಂಬ ಎಸ್ಎಂಎಸ್ ಮಿತ್ತಲ್ ಗೆ ಬಂದಿತ್ತು. ಅಸಲಿಗೆ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿಯೇ ಇರಲಿಲ್ಲ!

ಪರೀಕ್ಷಾ ವರದಿಯು ಮಿತ್ತಲ್ ಕೋವಿಡ್ ಗೆ ನೆಗೆಟಿವ್ ಆಗಿದ್ದಾರೆ ಎಂದು ತಿಳಿಸಿತ್ತು. ಆದರೆ ಅವರು ಪರೀಕ್ಷೆಗೆ ಒಳಗಾಗಿರಲಿಲ್ಲ. ಹೀಗಾಗಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಮಿತ್ತಲ್ ರನ್ನು ಹೊರಗಿನಿಂದಲೇ ವಾಪಸ್ ಕಳುಹಿಸಿದ್ದರು. ಏನು ನಡೆಯುತ್ತಿದೆ ಎನ್ನುವುದನ್ನು ಕಂಡುಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳೂ ಆಸಕ್ತಿ ತೋರಿಸಿರಲಿಲ್ಲ. ಕೊನೆಯ ಉಪಾಯವಾಗಿ ಮಿತ್ತಲ್ ಇ-ಮೇಲ್ ಮೂಲಕ ಐಸಿಎಂಆರ್ಗೆ ದೂರು ಸಲ್ಲಿಸಿದ್ದರು. 

ಇದರ ಬೆನ್ನಲ್ಲೇ ವಿಷಯದ ಬಗ್ಗೆ ತಾವು ತನಿಖೆ ನಡೆಸುವುದಾಗಿ ಐಸಿಎಂಆರ್ ಮಿತ್ತಲ್ ಗೆ ತಿಳಿಸಿತ್ತು. ಆದರೆ ನಂತರ ಅದರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಒಂದು ವಾರದ ಬಳಿಕ ಮಿತ್ತಲ್ ವಿವರಗಳನ್ನು ಕೋರಿ ತನ್ನ ಪರೀಕ್ಷೆ ನಡೆಸಿದ್ದ ಲ್ಯಾಬ್ ಗೆ ಆರ್ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದರು.

ಕುಂಭಮೇಳ ನಡೆಯುತ್ತಿದ್ದ ಹರಿದ್ವಾರದಲ್ಲಿ ಗಂಟಲುದ್ರವವನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ ಎಂದು ಹೇಳಲಾಗಿತ್ತು. ತನ್ಮಧ್ಯೆ ಐಸಿಎಂಆರ್ ಮಿತ್ತಲ್ ರ ದೂರನ್ನು ಉತ್ತರಾಖಂಡ ಆರೋಗ್ಯ ಇಲಾಖೆಗೆ ಕಳುಹಿಸಿತ್ತು. ಆಡಳಿತವು ನಡೆಸಿದ್ದ ವಿವರವಾದ ತನಿಖೆಯಲ್ಲಿ ಒಂದು ಲ್ಯಾಬ್ ನಡೆಸಿದ್ದ ಒಂದು ಲಕ್ಷ ನಕಲಿ ಕೋವಿಡ್ ಪರೀಕ್ಷೆಗಳಲ್ಲಿ ಮಿತ್ತಲ್ ಕೂಡ ಸೇರಿದ್ದನ್ನು ಬಹಿರಂಗಗೊಳಿಸಿತ್ತು.

‘ನಾನು ದೂರು ಸಲ್ಲಿಸಿದಾಗ ಇಷ್ಟೊಂದು ಬೃಹತ್ ಹಗರಣವನ್ನು ನಿರೀಕ್ಷಿಸಿರಲಿಲ್ಲ. ಯಾರೇ ಆದರೂ ಇದನ್ನು ನಿರೀಕ್ಷಿಸಿದ್ದರು ಎಂದು ನಾನು ಭಾವಿಸಿಲ್ಲ. ಈಗ ನಕಲಿ ಕೋವಿಡ್ ವರದಿಗಳ ಮೇಲೆ ಗಮನ ಕೇಂದ್ರೀಕೃತವಾಗಿದ್ದರೂ ನನ್ನ ದತ್ತಾಂಶಗಳ ಕಳ್ಳತನದ ಬಗ್ಗೆ ಉತ್ತರವನ್ನು ಪಡೆಯಲು ಪ್ರಯತ್ನವನ್ನು ಮುಂದುವರಿಸುತ್ತೇನೆ. ಏಜೆನ್ಸಿಗೆ ನನ್ನ ವೈಯಕ್ತಿಕ ವಿವರಗಳನ್ನು ಪಡೆಯುವುದು ಸಾಧ್ಯವಾಗಿದ್ದು ಹೇಗೆ ಎನ್ನುವುದು ನನಗಿನ್ನೂ ಗೊತ್ತಾಗಿಲ್ಲ ’ಎಂದು ಮಿತ್ತಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ವರದಿಗಳು ತಿಳಿಸಿರುವಂತೆ ಹರಿದ್ವಾರದ ಒಂದೇ ಲ್ಯಾಬ್ 50 ಜನರನ್ನು ನೋಂದಣಿ ಮಾಡಿಕೊಳ್ಳಲು ಒಂದೇ ಫೋನ್ ನಂಬರ್ ಬಳಸಿತ್ತು ಮತ್ತು ಒಂದು ಆ್ಯಂಟಿಜೆನ್ ಟೆಸ್ಟ್ ಕಿಟ್ 700 ಜನರನ್ನು ಪರೀಕ್ಷೆಗೊಳಪಡಿಸಿದೆ ಎಂದು ತೋರಿಸಿತ್ತು.

ವಿಳಾಸಗಳು ಮತ್ತು ಹೆಸರುಗಳು ಕಪೋಲಕಲ್ಪಿತವಾಗಿದ್ದವು. ಹರಿದ್ವಾರದ ‘ಮನೆ ನಂ.5’ರಿಂದ ಸುಮಾರು 530 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿತ್ತು. ಒಂದೇ ಮನೆಯಲ್ಲಿ ಅಷ್ಟೊಂದು ಜನರು ಇರಲು ಸಾಧ್ಯವೇ ಎಂದು ಪ್ರಶ್ನಿಸಿದ ಅಧಿಕಾರಿಯೋರ್ವರು,ಫೋನ್ ನಂಬರ್ಗಳೂ ನಕಲಿಯಾಗಿದ್ದವು. ಕಾನ್ಪುರ,ಮುಂಬೈ,ಅಹ್ಮದಾಬಾದ್ ಮತ್ತು ಇತರ 18 ಸ್ಥಳಗಳಲ್ಲಿಯ ಜನರು ಒಂದೇ ಫೋನ್ ನಂಬರ್ ಅನ್ನು ಹಂಚಿಕೊಂಡಿದ್ದರು ಎಂದರು.

ಕುಂಭಮೇಳವು ಎ.1ರಿಂದ 30ರವರೆಗೆ ನಡೆದಿತ್ತು. ನಡೆಸಲಾಗಿದ್ದ ಒಂದು ಲಕ್ಷ ಪರೀಕ್ಷೆಗಳ ಪೈಕಿ 177 ಸ್ಯಾಂಪಲ್ ಗಳು ಕೋವಿಡ್ ಗೆ ಪಾಸಿಟಿವ್ ಆಗಿದ್ದವು ಮತ್ತು ಪಾಸಿಟಿವಿಟಿ ದರ ಕೇವಲ ಶೇ.0.18ರಷ್ಟಿತ್ತು. ಆದರೆ ಹರಿದ್ವಾರದಲ್ಲಿ ಎಪ್ರಿಲ್ ನಲ್ಲಿ ಪಾಸಿಟಿವಿಟಿ ದರ ಶೇ.10ರಷ್ಟಿತ್ತು. ಕುಂಭಮೇಳಕ್ಕೆ ಆಗಮಿಸಿದವರನ್ನು ಯಾದ್ರಚ್ಛಿಕವಾಗಿ ಕೋವಿಡ್ ಪರೀಕ್ಷೆಗೊಳಪಡಿಸಲು ಹೃಷಿಕೇಶ ಜಿಲ್ಲಾಡಳಿತದಿಂದ 14 ಮತ್ತು ಕುಂಭಮೇಳ ಆಡಳಿತದಿಂದ 10,ಹೀಗೆ ಒಟ್ಟು 24 ಖಾಸಗಿ ಲ್ಯಾಬ್ ಗಳನ್ನು ನಿಯೋಜಿಸಲಾಗಿತ್ತು. ಪ್ರತಿದಿನ 50,000 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಲಾಗಿತ್ತು.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News