ಬೆಳ್ತಂಗಡಿ: ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಪಿತಾಂಬರ ಹೇರಾಜೆ ರಾಜೀನಾಮೆ

Update: 2021-07-03 07:13 GMT

ಬೆಳ್ತಂಗಡಿ: ಕೆಪಿಸಿಸಿ ಸದಸ್ಯರಾಗಿರುವ ನಿವೃತ್ತ ಎಸ್.ಪಿ ಪಿತಾಂಬರ ಹೇರಾಜೆ ರವರು ಜು.3 ರಂದು ತಮ್ಮ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎನ್ನುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಆಸಕ್ತ ಅರ್ಹ ಯುವಕರಿಗೆ ಆ ಸ್ಥಾನವನ್ನು ನೀಡಬೇಕಾಗಿ ವಿನಂತಿಸಿದ ಅವರು, ನನಗೆ ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಇರುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಉಳಿಯಲು ಇಚ್ಛಿಸಿದು, ಅವಶ್ಯಕತೆ ಇದ್ದರೆ ನನ್ನ ಸಲಹೆಗಳನ್ನು ಪಡೆಯಬಹುದು. ಇಷ್ಟು ದಿನ ಪಕ್ಷದಲ್ಲಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ವಿನಂತಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ರವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಇತ್ತೀಚೆಗೆ ಶಾಸಕರ ಮೂರನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಪೀತಾಂಬರ ಹೇರಾಜೆ ಅವರು ಶುಭಾಶಯ ಕೋರಿದ ವಿಷಯದಲ್ಲಿ ಅವರಿಗೆ ಬ್ಲಾಕ್ ಕಾಂಗ್ರೆಸ್ ನಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಇದೀಗ ಅವರ ರಾಜೀನಾಮೆ ಕುತೂಹಲಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News