ಬ್ಯಾರೀಸ್ ನಾಲೇಜ್ ಕ್ಯಾಂಪಸ್ ನಲ್ಲಿ ಕೋವಿಡ್ ಲಸಿಕೆ, ರಕ್ತದಾನ ಶಿಬಿರ
ಮಂಗಳೂರು, ಜು.8: ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಇದರ ಸಹಯೋಗದಲ್ಲಿ ಕೋವಿಡ್-19 ಲಸಿಕೆ ಹಾಗೂ ರಕ್ತದಾನ ಶಿಬಿರವನ್ನು ಬುಧವಾರ ಬ್ಯಾರೀಸ್ ನಾಲೇಜ್ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಡಾ.ಜೆ.ಎನ್. ಭಟ್ ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಬೆಂಕಿಯಂತೆ ಎಲ್ಲೆಡೆ ವ್ಯಾಪಿಸುತ್ತಿದೆ. ಲಸಿಕೆ ಇದರ ವಿರುದ್ಧದ ಹೋರಾಟಕ್ಕೆ ಗುರಾಣಿಯಾಗಿದೆ ಎಂದರು.
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ಸಹಕಾರಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕಾಗಿ ಸರಕಾರವು ಕಾಲೇಜು ಆವರಣಗಳಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದೆ. ಲಸಿಕೆ ಪಡೆಯುವುದು ಮತ್ತು ಸಮಾಜವನ್ನು ಆರೋಗ್ಯವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ನಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನೂ ಪ್ರೇರೇಪಿಸಬೇಕು ಎಂದವರು ಹೇಳಿದರು.
ಡಾ.ಅಝೀಝ್ ಮುಸ್ತಫ ಮಾತನಾಡಿ ಲಸಿಕೀಕರಣದ ಮಹತ್ವವನ್ನು ವಿವರಿಸಿದರು.
ಬೋಳಿಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸುನೀತಾ, ಇಂಡಿಯನ್ ರೆಡ್ ಕ್ರಾಸ್ ಮಂಗಳೂರು, ಇದರ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಸದಸ್ಯ ಶಹೀರ್, ಎಸ್.ಡಿ.ಆರ್.ಟಿ ಸದಸ್ಯ ಸಿದ್ದೀಕ್, ಕಾರ್ಯಕ್ರಮದ ಸಂಯೋಜಕರಾದ ಬಿಐಟಿ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಝಹೀರ್ ಅಹ್ಮದ್, ರಫೀಕ್ ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಡಾ.ಮಂಜೂರು ಬಾಷಾ ಸ್ವಾಗತಿಸಿದರು.