ಶ್ರೀನಗರ: ಎನ್ ಕೌಂಟರ್ ನಲ್ಲಿ ಇಬ್ಬರು ಶಂಕಿತ ಉಗ್ರರು ಸಾವು
Update: 2021-07-17 19:12 GMT
ಹೊಸದಿಲ್ಲಿ: ಶ್ರೀನಗರದ ದಾನ್ಮರ್ ನಲ್ಲಿ ಭದ್ರತಾ ಸಿಬ್ಬಂದಿ ಶುಕ್ರವಾರ ಮುಂಜಾನೆ ನಡೆಸಿದ ಎನ್ಕೌಂಟರ್ನಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಾಗರಿಕರ ಮೇಲಿನ ಹಲವು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬೇಕಾಗಿದ್ದ ಲಷ್ಕರೆ ತಯ್ಯಬ (ಎಲ್ಇಟಿ)ದ ಇಬ್ಬರು ಶಂಕಿತ ಉಗ್ರರ ಹತರಾಗಿದ್ದಾರೆ. ಎನ್ ಕೌಂಟರ್ ನಲ್ಲಿ ಹತರಾದ ಶಂಕಿತ ಉಗ್ರರನ್ನು ಇರ್ಫಾನ್ ಸೋಫಿ ಹಾಗೂ ಬಿಲಾಲ್ ಅಹ್ಮದ್ ಭಟ್ ಎಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರೂ ಶ್ರೀನಗರದ ನಾಟಿಪೋರಾದ ನಿವಾಸಿಗಳು. ಇವರಿಬ್ಬರು ಕಳೆದ ವರ್ಷ ಡಿಸೆಂಬರ್ ನಿಂದಲೇ ಸಕ್ರಿಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ಅವಿತಿರುವ ಮಾಹಿತಿ ಹಿನ್ನೆಲೆಯಲ್ಲಿ ಜಂಟಿ ಪಡೆ ಈ ಪ್ರದೇಶವನ್ನು ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತು. ಶೋಧ ಕಾರ್ಯಾಚರಣೆ ಸಂದರ್ಭ ಉಗ್ರರು ಗುಂಡು ಹಾರಿಸಿದರು. ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸರ ಹೇಳಿಕೆ ತಿಳಿಸಿದೆ.