ಪೂಂಛ್ ನಲ್ಲಿ ನೆಲಬಾಂಬ್ ಸ್ಫೋಟಿಸಿ ಯೋಧ ಹುತಾತ್ಮ
Update: 2021-07-24 16:49 GMT
ಜಮ್ಮು, ಜು.24: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ನೆಲ ಬಾಂಬ್ ಒಂದು ಸ್ಫೋಟಿಸಿದ ಪರಿಣಾಮ ಭಾರತೀಯ ಸೇನೆಯ ಯೋಧನೋರ್ವ ಹುತಾತ್ಮನಾಗಿರುವುದಾಗಿ ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು.
ಶುಕ್ರವಾರ ಕೃಷ್ಣಾ ಘಾಟಿ ವಿಭಾಗದ ಎಲ್ಎಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಾಯಿ ಕಮಲದೇವ ವೈದ್ಯ(27) ನೆಲಬಾಂಬ್ವೊಂದರ ಮೇಲೆ ಕಾಲಿರಿಸಿದಾಗ ಅದು ಸ್ಫೋಟಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಹಿಮಾಚಲ ಪ್ರದೇಶದ ಹಮೀರಪುರ ಜಿಲ್ಲೆಯ ಘುಮರ್ವಿನ್ ಗ್ರಾಮದ ನಿವಾಸಿಯಾಗಿದ್ದ ವೈದ್ಯ ತಾಯಿ ವನಿತಾದೇವಿ ಅವರನ್ನು ಅಗಲಿದ್ದಾರೆ ಎಂದು ಸೇನೆಯ ವಕ್ತಾರರು ತಿಳಿಸಿದರು.