ಎಎಚ್ಪಿಐ ಅಧ್ಯಕ್ಷರಾಗಿ ಸುಶೀಲ್ ಜತನ್ನ ನೇಮಕ
Update: 2021-07-27 11:36 GMT
ಮಂಗಳೂರು: ಭಾರತೀಯ ಆರೋಗ್ಯಸೇವೆ ಪೂರೈಕೆದಾರರ ಸಂಘದ (ಎಎಚ್ಪಿಐ) ರಾಜ್ಯ ಘಟಕದ ಅಧ್ಯಕ್ಷರಾಗಿ ಉಡುಪಿಯ ಲೋಂ ಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತನ್ನ ಅವರು ನೇಮಕಗೊಂಡಿದ್ದಾರೆ.
ಜನರಲ್ ಮೆಡಿಸಿನ್, ಪಬ್ಲಿಕ್ ಹೆಲ್ತ್ ಮೆಡಿಸಿನ್ ಮತ್ತು ಮ್ಯಾನೇಜ್ಮೆಂಟ್ ಎಂಬ ಮೂರು ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಅರ್ಹತೆಗಳನ್ನು ಹೊಂದಿರುವ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಪ್ರಸ್ತುತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ (ಸಿಎಂಸಿ) ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ರೋಟರಿ ಕಬ್ ಆಫ್ ಮಂಗಳೂರಿನ ಸದಸ್ಯರಾಗಿದ್ದಾರೆ.
ಅವರು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ, ಅದರ ಬ್ಲಡ್ ಬ್ಯಾಂಕ್ ಸಮಿತಿಯ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಅಂತರ ಡಯೋಸಿಸ್ ವೈದ್ಯಕೀಯ ಮಂಡಳಿಯ ಕಾರ್ಯದರ್ಶಿಯಾಗಿ, ಸಿಎಸ್ಐ ಸಿನೋಡ್ ನ ವೈದ್ಯಕೀಯ ಮಂಡಳಿಯ ಸಂಯೋಜಕರೂ ಆಗಿದ್ದರು.