ಶಕ್ತಿ ಪಪೂ ಕಾಲೇಜ್ : ಕಬಡ್ಡಿ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ

Update: 2021-07-31 12:21 GMT

ಮಂಗಳೂರು, ಜು.31: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶ ಪಡೆಯಲು ಕಬಡ್ಡಿಯ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ದ.ಕ. ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸ್ವಯಂ ಶಿಸ್ತಿನಿಂದ ಯಶಸ್ಸು ಸಾಧ್ಯ. ಆಲೋಚನೆಗಳು, ನಡವಳಿಕೆಗಳು ಹಾಗೂ ಪರಿಶ್ರಮವು ಸರಿಯಾದ ಪ್ರತಿಫಲವನ್ನು ನೀಡುತ್ತವೆ. ಕಬಡ್ಡಿ ಆಟದಿಂದ ದೈಹಿಕ ಮತ್ತು ಆಂತರಿಕ ಶಕ್ತಿ ಗಳಿಸಲು ಸಾಧ್ಯವಾಗುತ್ತದೆ. ಸರಳತೆ ಮತ್ತು ಸಾರ್ವಜನಿಕ ಆಕರ್ಷಣೆಯಿಂದಾಗಿ ಕಬಡ್ಡಿ ಆಟವು ಜನಸಾಮಾನ್ಯರ ಶಿಸ್ತಿನ ಆಟವಾಗಿದೆ ಎಂದರು.

ಅಧ್ಯಯನದ ಜೊತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಅಸಾಧಾರಣ ಪ್ರಯತ್ನಗಳಿಂದ ಉತ್ತಮ ಸಾಧನೆ ಮಾಡಬಹುದು. ಪ್ರತಿವರ್ಷ ಕನಿಷ್ಠ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿಗಳು ಶಕ್ತಿ ಪಪೂ ಕಾಲೇಜಿನಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಲು ಅರ್ಹರಾಗಿರ ಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ರಾಜರಾಮ್ ರಾವ್ ಮಾತನಾಡಿ, ಕಬಡ್ಡಿಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ತರಬೇತಿ ನೀಡುವ ಕುರಿತಂತೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಸಂಸ್ಥೆಯ ತೀರ್ಮಾನವನ್ನು ಪ್ರಶಂಸಿದರು.

ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವುದರ ಜೊತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ತರುವುದರ ಮೂಲಕ ಶಕ್ತಿ ವಿದ್ಯಾ ಸಂಸ್ಥೆಯ ಕಲ್ಪನೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಗೆಲುವು ಮತ್ತು ಸೋಲು ಆಟದ ಭಾಗ. ಫಲಿತಾಂಶವನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಬೇಕು ಎಂದು ಅವರು ಹೇಳಿದರು.

ಶಕ್ತಿ ಪಪೂ ಕಾಲೇಜಿನ ದೈಹಿಕ ನಿರ್ದೇಶಕರು ಮತ್ತು ಕಬಡ್ಡಿ ತರಬೇತುದಾರ ಆಕಾಶ್ ಶೆಟ್ಟಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಅಧಿಕ ಕಬಡ್ಡಿ ಪ್ರತಿಭೆಗಳು ಭಾಗವಹಿಸಿದರು. ದೈಹಿಕ ಶಿಕ್ಷಕಿ ಸುರೇಖಾ, ರಾಜೇಶ್ ಖಾರ್ವಿ, ಹರ್ಷಿತ್, ಪ್ರಕಾಶ್ ಮತ್ತು ಶಿವಪ್ರಸಾದ್ ತಂಡಕ್ಕೆ ಸಹಕಾರವನ್ನು ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ. ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಕೃತ ಅಧ್ಯಾಪಕ ಶ್ರೀವರ ಪ್ರಾರ್ಥಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಿಲ್ಪಾ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯ ಜ್ಯೋತಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಪ್ರೀತಿ ಕೀಕನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News