ಕನ್ನಡ ಜಾನಪದ ಅಧ್ಯಯನದಲ್ಲಿ ರಾಮಾನುಜನ್ ಸದಾ ಸ್ಮರಣೀಯರು: ಡಾ.ವಿವೇಕ್ ರೈ

Update: 2021-07-31 14:01 GMT
ಡಾ.ವಿವೇಕ್ ರೈ

ಉಡುಪಿ, ಜು.31: ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನಕ್ಕೆ ಡಾ. ಎ.ಕೆ. ರಾಮಾನುಜನ್ ಅವರ ಕೊಡುಗೆ ಅಪೂರ್ವವಾದುದು. ಕನ್ನಡ ಜಾನಪದ ಅಧ್ಯಯನದಲ್ಲಿ ಸೈದ್ದಾಂತಿಕ ನೆಲೆಗಟ್ಟನ್ನು ನೀಡುವಲ್ಲಿ ರಾಮಾನುಜನ್ ಕೊಡುಗೆ ಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.ಅವರ ಶರಣರ ವಚನಗಳ ಕುರಿತಾದ ‘ದಿ ಸ್ಪೀಕಿಂಗ್ ಆಫ್ ಶಿವ’ ಅಂಗ್ಲ ಕೃತಿಯು ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಖ್ಯಾತ ಕನ್ನಡ-ತುಳು ವಿದ್ವಾಂಸ, ವಿಶ್ರಾಂತ ಕುಲಪತಿ ಹಾಗೂ ಜರ್ಮನಿಯ ವುರ್ಜ್‌ಬರ್ಗ್ ಇಂಡಸ್ ವಿಶ್ವದ್ಯಾನಿಲಯದ ಅತಿಥಿ ಪ್ರಾಧ್ಯಾಪಕ ಪ್ರೊ.ಬಿ.ಎ. ವಿವೇಕ್ ರೈ ಹೇಳಿದ್ದಾರೆ.

ತೆಂಕನಿಡಿಯೂರಿನ ಸರಕಾರಿಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ‘ಎ.ಕೆ. ರಾಮಾನುಜನ್ ಅವರ ಕೊಡುಗೆ -ಸಂವಾದ’ ರಾಜ್ಯಮಟ್ಟದ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವದ್ಯಾನಿಲಯ ಕುಲಪತಿ ಪ್ರೊ.ಡಿ.ಬಿ.ನಾಯಕ್ ಉದ್ಘಾಟಿಸಿದರು.

ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಮಾತನಾಡಿ, ಜಾಗತಿಕವಾಗಿ ಜಾನಪದಕ್ಕೆ ಕೊಡುಗೆ ನೀಡಿದ 18 ವಿದ್ವಾಂಸರ ಸಂದರ್ಶನವನ್ನು ನಡೆಸಲಾಗಿದೆ. ಅವರಲ್ಲಿ ಎ.ಕೆ. ರಾಮಾನುಜನ್ ಅವರು ಜಾನಪದ ಸಂಶೋಧನೆಗೆ ತಾನು ತೆರೆದುಕೊಂಡ ರೀತಿಯನ್ನು ವಿವರಿಸಿದ್ದರು. ಈ ಸಂದರ್ಶನವನ್ನು ಅಧಾರವಾಗಿಟ್ಟುಕೊಂಡು ರಾಮಾನುಜನ್ ಅವರ ಕೊಡುಗೆಯನ್ನು ಅವರು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಎಕ್ಕಾರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐಕ್ಯೂಎಸಿ ಮುಖ್ಯಸ್ಥ ಡಾ.ಸುರೇಶ್ ರೈ ಕೆ. ಉಪಸ್ಥಿತರಿದ್ದರು. ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಟ್ರಸ್ಟಿ ಮ್ಯೂಸಿಕಾ ಸುಪ್ರೀಯ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News