ಮಂಗಳೂರಿನಲ್ಲಿ ಮತ್ತೊಂದು ಬೋಟು ದುರಂತ: ಓರ್ವ ನೀರುಪಾಲು, 9 ಮೀನುಗಾರರ ರಕ್ಷಣೆ

Update: 2021-08-05 11:41 GMT

ಮಂಗಳೂರು, ಆ.5: ಮಂಗಳೂರಿನಲ್ಲಿ ಮತ್ತೊಂದು ಬೋಟು ದುರಂತ ಸಂಭವಿಸಿ, ಓರ್ವ ಮೀನುಗಾರ ನೀರು ಪಾಲಾದರೆ, 9 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಉಳ್ಳಾಲ ಸಮೀಪದ ಸಮುದ್ರ ಮಧ್ಯೆ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಮುಳುಗಿ ಈ ದುರಂತ ಸಂಭವಿಸಿದೆ.

ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಈ ದುರಂತ ವರದಿಯಾಗಿದೆ. ಉಳ್ಳಾಲ ಸಮೀಪದ ಸಮುದ್ರ ಮಧ್ಯೆ ಕೆಲ ವರ್ಷಗಳ ಹಿಂದೆ ಮುಳುಗಿದ್ದ ಹಡಗಿದೆ ಢಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ. ಬೋಟಿನಲ್ಲಿ 10 ಕಾರ್ಮಿಕರಿದ್ದು, ಕೂಡಲೇ ಅವರನ್ನು ಹಿಂದಿನಿಂದ ಬರುತ್ತಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. 

ಈ ವೇಳೆ ಒಂಬತ್ತು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಆದರೆ ಒಬ್ಬಾತ ನೀರಿನಲ್ಲಿ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ತಮಿಳುನಾಡು ಮೂಲದ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ‘ಆದ್ಯ’ ಹೆಸರಿನ ಬೋಟ್ ಆಗಿದ್ದು, ಅದರ ಮಾಲಕ ಉಳ್ಳಾಲ ಮೊಗವೀರಪಟ್ಣದವರು ಎಂದು ತಿಳಿದುಬಂದಿದೆ.

ಸುಮಾರು ವರ್ಷಗಳ ಹಿಂದೆ ಮುಳುಗಿದ್ದ ಹಡಗನ್ನು ತೆರವುಗೊಳಿಸಿಲ್ಲ. ಅಲ್ಲದೆ, ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್‌ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ: ಕಡಲಲ್ಲಿ ನಾಪತ್ತೆಯಾಗಿರುವ ಮೀನುಗಾರನಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ. ಸುಮಾರು 10 ಬೋಟುಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಟ್ರಾಲ್‌ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News