×
Ad

ವಾಕ್ ಸ್ವಾತಂತ್ರ್ಯದ ಪ್ರತಿಪಾದಕ ನ್ಯಾಯಾಧೀಶ ನಾರಿಮನ್ ನಿವೃತ್ತಿ

Update: 2021-08-12 22:25 IST

ಹೊಸದಿಲ್ಲಿ, ಆ.12: ಹಲವು ಮಹತ್ವದ ತೀರ್ಪು ನೀಡಿದ, ಖಾಸಗಿತನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಹಿರಿಯ ನ್ಯಾಯಾಧೀಶ ರೋಹಿಂಟನ್ ಫಾಲಿ ನಾರಿಮನ್ ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾಗಿ 7 ವರ್ಷದ ಕರ್ತವ್ಯ ನಿರ್ವಹಣೆಯ ಬಳಿಕ ಆಗಸ್ಟ್ 12ರಂದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ನ್ಯಾಯವಾದಿ ಫಾಲಿ ನಾರಿಮನ್ ಪುತ್ರನಾಗಿರುವ ರೋಹಿಂಗ್ಟನ್ ಹಾರ್ವರ್ಡ್ ಕಾನೂನು ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ತಮ್ಮ 37ನೇ ವಯಸ್ಸಿನಲ್ಲಿಯೇ, 1993ರಲ್ಲಿ ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯವಾದಿಯಾಗಿ ನಿಯೋಜಿತರಾಗಿದ್ದರು. 

2011ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿ ನಿಯುಕ್ತಿಗೊಂಡಿದ್ದು 2013ರಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗಿನ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಆದರೆ ನಾರಿಮನ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. 2014ರ ಜುಲೈ 7ರಂದು ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಬಾರ್ ಕೌನ್ಸಿಲ್ನಿಂದ ನ್ಯಾಯಪೀಠಕ್ಕೆ ಭಡ್ತಿ ಪಡೆದ 4ನೇ ನ್ಯಾಯವಾದಿಯೆಂಬ ಹಿರಿಮೆಗೆ ಪಾತ್ರರಾಗಿದ್ದರು. ತೀರ್ಪು ನೀಡುವಾಗ ಅತ್ಯಂತ ನಿಷ್ಠುರರಾಗಿರುತ್ತಿದ್ದರು ನಾರಿಮನ್. 

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ಕ್ಕೆ ಯುಪಿಎ ಸರಕಾರ ಸೇರಿಸಿದ ವಿವಾದಾತ್ಮಕ 66ಎ ಸೆಕ್ಷನ್(ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತಪಡಿಸಿದವರನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡುವ ಸೆಕ್ಷನ್) ಅನ್ನು ರದ್ದುಗೊಳಿಸಿ 2015ರ ಮಾರ್ಚ್ ನಲ್ಲಿ ನೀಡಿದ್ದ ತೀರ್ಪಿನಲ್ಲಿ ‘ ಈ ಸೆಕ್ಷನ್ ವಾಕ್ಸ್ವಾತಂತ್ರ್ಯದ ಹಕ್ಕನ್ನು ಅನಿಯಂತ್ರಿತವಾಗಿ, ಅತಿಯಾಗಿ ಮತ್ತು ಅಸಮಾನವಾಗಿ ಉಲ್ಲಂಘಿಸುತ್ತದೆ ಮತ್ತು ಇಂತಹ ಹಕ್ಕುಗಳ ಹಾಗೂ ಹಕ್ಕುಗಳ ಮೇಲೆ ವಿಧಿಸಬಹುದಾದ ನ್ಯಾಯಸಮ್ಮತ ನಿರ್ಬಂಧಗಳ ನಡುವಿನ ಸಮತೋಲನವನ್ನು ಬುಡಮೇಲುಗೊಳಿಸುತ್ತದೆ’ ಎಂದು ಉಲ್ಲೇಖಿಸಿದ್ದರು. 

ನಾರಿಮನ್ ಸದಸ್ಯರಾಗಿದ್ದ ನ್ಯಾಯಪೀಠದ ಕೆಲವು ಮಹತ್ವದ ತೀರ್ಪುಗಳು:

* ಮುಸ್ಲಿಮರಲ್ಲಿ ಜಾರಿಯಲ್ಲಿಲ್ಲದ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ 2017ರ ಆಗಸ್ಟ್ ನ ತೀರ್ಪು. 

* ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ತೀರ್ಪು. ಗೌಪ್ಯತೆಯು ಸಂವಿಧಾನದ 21ನೇ ಪರಿಚ್ಛೇದದಡಿ ಖಾತರಿಪಡಿಸಿರುವ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. 

* ಸಲಿಂಗಕಾಮ ಅಪರಾಧವಲ್ಲ ಎಂದು 2018ರಲ್ಲಿ ನೀಡಿದ್ದ ತೀರ್ಪು. 

* ವ್ಯಭಿಚಾರ ನಡೆಸುವ ಪುರುಷರನ್ನು ಶಿಕ್ಷೆಗೆ ಗುರಿಪಡಿಸುವ ಐಪಿಸಿ ಸೆಕ್ಷನ್ 497 ರದ್ದುಗೊಳಿಸಿದ 2018ರ ಸೆಪ್ಟೆಂಬರ್ನ ತೀರ್ಪು. 

* ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವರ್ಗದ ಮಹಿಳೆಯರಿಗೂ ಪ್ರವೇಶಾವಕಾಶ ನೀಡುವ 2018 ಸೆಪ್ಟೆಂಬರ್ನ ತೀರ್ಪು.

* ಅಸ್ಸಾಂನಲ್ಲಿ ಎನ್ಆರ್ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಪರಿಷ್ಕರಣೆಗೆ ಸೂಚಿಸಿದ ತೀರ್ಪು. ಈ ತೀರ್ಪು 1955ರ ಪೌರತ್ವ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಮಾನವಹಕ್ಕುಗಳ ಸಂಘಟನೆಯಿಂದ ತೀವ್ರ ವಿರೋಧ ಎದುರಾಗಿತ್ತು. 

* ಸಿಬಿಐ, ಎನ್ಐಎ ಕಚೇರಿ ಹಾಗೂ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಲು ಸೂಚಿಸಿದ 2020 ಡಿಸೆಂಬರ್ನ ತೀರ್ಪು. ಮಾನವಹಕ್ಕುಗಳ ರಕ್ಷಣೆಗೆ ಇದು ಅಗತ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. 

* ಎಸ್ಸಿ/ಎಸ್ಟಿ ಸಮುದಾಯದ ಶ್ರೀಮಂತರನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡುವ ಕೆನೆಪದರ ನಿಯಮ ಸರಿ ಎಂಬ 2018ರ ಸೆಪ್ಟೆಂಬರ್ ನ ತೀರ್ಪು. 

* 2020ರ ಮಾರ್ಚ್ ನಲ್ಲಿ ಮಣಿಪುರದ ಸಚಿವ ಥೌನಾಜೋಮ್ ಶ್ಯಾಮ್ಕುಮಾರ್ ಸಿಂಗ್ರನ್ನು ಅನರ್ಹಗೊಳಿಸಬೇಕೆಂಬ ಅರ್ಜಿಯ ವಿಚಾರಣೆಗೆ ವಿಧಾನಸಭೆ ಸ್ಪೀಕರ್ ವಿಳಂಬಧೋರಣೆ ಅನುಸರಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಸಂವಿಧಾನದ 142ನೇ ಪರಿಚ್ಛೇದದಡಿ ನೀಡಲಾದ ವಿಶೇಷಾಧಿಕಾರ ಬಳಸಿ, ಸಚಿವರನ್ನು ಅನರ್ಹಗೊಳಿಸುವ ಆದೇಶ ನೀಡಿತ್ತು. 

* ಎರಿಕ್ಸನ್ ಇಂಡಿಯಾ ಸಂಸ್ಥೆಗೆ ನೀಡಬೇಕಿದ್ದ 550 ಕೋಟಿ ರೂ. ಪಾವತಿಸಲು ಸೂಚಿಸಿದ್ದ ಸುಪ್ರೀಂಕೋರ್ಟ್ ಆದೇಶ ಪಾಲಿಸದ ರಿಲಯನ್ಸ್ ಕಮ್ಯುನಿಕೇಷನ್ಸ್ನ ಅಧ್ಯಕ್ಷ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂಬ 2019ರ ಫೆಬ್ರವರಿಯ ತೀರ್ಪು. 

* ಎಲ್ಲಾ ಪಕ್ಷಗಳೂ ನಿಗದಿತ ಅವಧಿಯೊಳಗೆ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಅಪರಾಧದ ಮಾಹಿತಿ ನೀಡಬೇಕೆಂಬ ಸೂಚನೆ. ಈ ಸೂಚನೆ ಪಾಲಿಸದ 9 ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಎಸಗಿವೆ ಎಂದು 2 ದಿನದ ಹಿಂದೆ ನೀಡಿದ್ದ ತೀರ್ಪು. 

* ಫ್ಯೂಚರ್ ರಿಟೈಲ್ ಲಿ. ಸಂಸ್ಥೆ ತನ್ನ ಆಸ್ತಿಗಳನ್ನು ಮುಕೇಶ್ ಅಂಬಾನಿಯ ರಿಲಯನ್ಸ್ ಇನ್ಫ್ರಾಸ್ಟಕ್ಚರ್ ಸಂಸ್ಥೆಗೆ ಮಾರಾಟ ಮಾಡುವ ಒಪ್ಪಂದಕ್ಕೆ ತಡೆ ನೀಡಿದ 2021ರ ಆಗಸ್ಟ್ 6ರ ತೀರ್ಪು. 

* ಟೆಲಿಕಾಂ ಗ್ರಾಹಕರ ಕಾಯ್ದೆ ನಿಯಮ 2015ನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ 2016ರ ಮೇ ತಿಂಗಳ ತೀರ್ಪು. 

* ಬೆಂಗಳೂರು ಕ್ಲಬ್ ಅನ್ನು ಸಂಪತ್ತು ತೆರಿಗೆ ವ್ಯಾಪ್ತಿಯಡಿ ಸೇರಿಸಲಾಗದು ಎಂಬ 2020ರ ಸೆಪ್ಟಂಬರ್ ನ ತೀರ್ಪು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News