ಮಾನಿಟೈಸೇಶನ್ ಅಂದರೆ ಏನೆಂದು ಅವರಿಗೆ ತಿಳಿದಿದೆಯೇ?: ರಾಹುಲ್ ಗಾಂಧಿ ಟೀಕೆಗೆ ವಿತ್ತ ಸಚಿವೆಯ ತಿರುಗೇಟು
Update: 2021-08-25 12:10 GMT
ಹೊಸದಿಲ್ಲಿ: ಸೋಮವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ನ್ಯಾಷನಲ್ ಮಾನಿಟೈಸೇಶನ್ ಪೈಪ್ಲೈನ್ ಯೋಜನೆಯನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿತ್ತ ಸಚಿವೆ ಇಂದು ಕಿಡಿಕಾರಿದ್ದಾರೆ.
"ಅವರಿಗೆ (ರಾಹುಲ್ ಗಾಂಧಿ) ಮಾನಿಟೈಸೇಶನ್ ಅಂದರೆ ಏನೆಂದು ತಿಳಿದಿದೆಯೇ?" ಎಂದು ಪ್ರಶ್ನಿಸಿದ ಸಚಿವೆ ದೇಶದ ಸಂಪನ್ಮೂಲಗಳನ್ನು ಕಾಂಗ್ರೆಸ್ ಮಾರಾಟ ಮಾಡಿ ಲಂಚ ಪಡೆದಿತ್ತು ಎಂದು ಆರೋಪಿಸಿದ್ದಾರೆ.
ದೇಶದ 25 ವಿಮಾನ ನಿಲ್ದಾಣಗಳು, 40 ರೈಲ್ವೆ ನಿಲ್ದಾಣಗಳು ಮತ್ತಿತರ ಸರಕಾರಿ ಆಸ್ತಿಗಳನ್ನು ಖಾಸಗಿ ಹೂಡಿಕೆಗೆ ಸರಕಾರ ಗುರುತಿಸಿರುವುದು ಆಡಳಿತ-ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ಸರಕಾರದ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ "ದೇಶದ ಮುಕುಟಪ್ರಾಯದಂತಿರುವ ಹಾಗೂ 70 ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಹಣದಿಂದ ನಿರ್ಮಾಣಗೊಂಡವುಗಳನ್ನು ಪ್ರಧಾನಿಯ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಾಟ ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ," ಎಂದು ಹೇಳಿದ್ದರು.