ಕಾನೂನು ಬಾಹಿರವೆಂದಾದರೆ ನಾನು ʼಸಲಾಂʼ ಹೇಳುವುದು ನಿಲ್ಲಿಸುತ್ತೇನೆ: ಪೊಲೀಸ್‌ ಹೇಳಿಕೆ ಕುರಿತು ಖಾಲಿದ್‌ ಸೈಫಿ

Update: 2021-09-10 14:00 GMT
Photo: Thehindu

ಹೊಸದಿಲ್ಲಿ: ದಿಲ್ಲಿ ಗಲಭೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಖಾಲಿದ್‌ ಸೈಫಿ, ಪೊಲೀಸರ ʼಅಸ್ಸಲಾಂ ಅಲೈಕುಂʼ ಕುರಿತಾದ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಒಂದು ವೇಳೆ ಸಲಾಂ ಹೇಳುವುದು ಕಾನೂನು ಬಾಹಿರ ಎಂದಾದರೆ ನಾನು ಅದನ್ನು ನಿಲ್ಲಿಸುತ್ತೇನೆ" ಎಂದ ಪೊಲೀಸ್‌ ಹೇಳಿಕೆಯ ಕುರಿತು ನ್ಯಾಯಾಲಯದಲ್ಲಿ ಅಸಮಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಶರ್ಜೀಲ್‌ ಇಮಾಂರ ಜಾಮೀನು ಅರ್ಜಿ ವಿಚಾರಣೆಯ ವೇಳೆ ಪೊಲೀಸರು " ಅವರು ತಮ್ಮ ಭಾಷಣವನ್ನು ಅಸ್ಸಲಾಮು ಅಲೈಕುಂ ಎಂದು ಪ್ರಾರಂಭಿಸಿದ್ದರು. ಇದು ಅವರು ಪ್ರತ್ಯೇಕ ಸಮುದಾಯವೊಂದನ್ನು ಉದ್ದೇಶಿಸಿ ಮಾತನಾಡಿದ್ದಾರೆ ಅನ್ನುವುದಕ್ಕಿರುವ ಪುರಾವೆಯಾಗಿದೆ" ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಕುರಿತು ಖಾಲಿದ್‌ ಸೈಫಿ ಮಾತನಾಡುತ್ತಿದ್ದರು.

"ನಾನು ಯಾವತ್ತೂ ನನ್ನ ಸ್ನೇಹಿತರನ್ನು, ಆತ್ಮೀಯರನ್ನು ಸಲಾಂನೊಂದಿಗೆ ಅಭಿನಂದಿಸುತ್ತೇನೆ. ಇದು ಕಾನೂನು ಬಾಹಿರ ಎಂದಾಗಿದ್ದಲ್ಲಿ ನಾನು ಅದನ್ನು ನಿಲ್ಲಿಸಬೇಕಿದೆ ಎಂದು ಭಾವಿಸುತ್ತೇನೆ. ಇದು ಕಾನೂನೇ? ಅಥವಾ ಪ್ರಾಸಿಕ್ಯೂಷನ್‌ ತಂಡದ ಊಹೆಯೇ? ಎಂದು ಸೈಫಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರನ್ನು ಪ್ರಶ್ನಿಸಿದರು. ಇದು ಪ್ರಾಸಿಕ್ಯೂಷನ್‌ ವಾದವಾಗಿದ್ದು, ನ್ಯಾಯಾಲಯದ ಮಾತಲ್ಲ ಎಂದು ಎಎಸ್‌ಜೆ ರಾವತ್‌ ಅವರು ಸ್ಪಷ್ಟಪಡಿಸಿದರು.

"ನಾನು ಜಾಮೀನು ಪಡೆದ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಪೊಲೀಸರ ವಿರುದ್ಧ ʼಬೆಳೆಬಾಳುವ ಎರಡು ದಶಲಕ್ಷ ಕಾಗದಗಳನ್ನುʼ ಈ ಪ್ರಕರಣದ ಚಾರ್ಜ್‌ ಶೀಟ್‌ ಗಾಗಿ ವ್ಯರ್ಥ ಮಾಡಿದ್ದಾರೆ" ಎಂಬ ಪ್ರಕರಣವನ್ನು ದಾಖಲಿಸುತ್ತೇನೆ" ಎಂದು ನ್ಯಾಯಾಲದಲ್ಲಿ ಸೈಫಿ ಹೇಳಿದ್ದಾಗಿ indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News