ದಲಿತ ಲೇಖಕಿಯರು,ಮಹಾಶ್ವೇತ ದೇವಿ ಸಾಹಿತ್ಯ ಪಠ್ಯದಲ್ಲಿ ಮರು ಸೇರ್ಪಡೆಗೆ ಆಗ್ರಹಿಸಿ ದಿಲ್ಲಿ ವಿವಿಗೆ ಶಿಕ್ಷಣ ತಜ್ಞರ ಪತ್ರ

Update: 2021-09-14 17:18 GMT

ಹೊಸದಿಲ್ಲಿ, ಸೆ. 14:   ತಮಿಳು ದಲಿತ ಲೇಖಕಿಯರಾದ ಬಾಮಾ ಫೌಸ್ಟಿನ ಸೂಸೈರಾಜ್, ಸುಕಿರ್ತಾರಣಿ ಹಾಗೂ ಬಂಗಾಳಿ ಲೇಖಕಿ ಮಹಾಶ್ವೇತ ದೇವಿ ಅವರ ಸಾಹಿತ್ಯವನ್ನು ಪಠ್ಯದಲ್ಲಿ ಮರು ಸೇರ್ಪಡೆಗೆ ಆಗ್ರಹಿಸಿ 348 ಗಣ್ಯ ನಾಗರಿಕರನ್ನು ಒಳಗೊಂಡ ಗುಂಪು ದಿಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಪತ್ರ ಬರೆದಿದೆ.

‘ದಲಿತ್ ಇಂಟಲೆಕ್ಚುವಲ್ ಕಲೆಕ್ಟಿವ್’ ಪರವಾಗಿ ಪತ್ರವನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಅವರಿಗೆ ರವಾನಿಸಲಾಗಿದೆ.

ಕಳೆದ ತಿಂಗಳು ದಿಲ್ಲಿ ವಿಶ್ವವಿದ್ಯಾನಿಲಯ ತನ್ನ ಬಿಎ (ಹಾನರ್ಸ್) ಇಂಗ್ಲೀಷ್ ಕೋರ್ಸ್ ನ ಪಠ್ಯಕ್ರಮದಿಂದ ಮಹಾಶ್ವೇತ ದೇವಿ ಅವರ ದ್ರೌಪದಿ, ಸುಕಿರ್ತರಿಗೆ ಅವರು ಮೈಬಾಡಿ ಹಾಗೂ ಸೂಸೈರಾಜ್ ಅವರ ಸಂಗತಿ ಪಠ್ಯಗಳನ್ನು ಕೈಬಿಟ್ಟಿತ್ತು. ವಿಶ್ವವಿದ್ಯಾನಿಲಯದ ಈ ನಿರ್ಧಾರಕ್ಕೆ ವಿ.ವಿ.ಯ ಶೈಕ್ಷಣಿಕ ಮಂಡಳಿಯ 15 ಸದಸ್ಯರು ಸೇರಿದಂತೆ ಹಲವರಿಂದ ಟೀಕೆ ವ್ಯಕ್ತವಾಗಿತ್ತು.

ಈ ನಿರ್ಧಾರವನ್ನು ಪಠ್ಯಕ್ರಮದ ‘ಗರಿಷ್ಠ ವಿಧ್ವಂಸಕ’ ಎಂದು ಆರೋಪಿಸಿದ ಮಂಡಳಿ ಸದಸ್ಯರು ಈ ನಡೆಯ ವಿರುದ್ಧ ಭಿನ್ನಾಭಿಪ್ರಾಯದ ಪತ್ರ ಸಲ್ಲಿಸಿದ್ದರು. ‘ದಲಿತ್ ಇಂಟಲೆಕ್ಚುವಲ್ ಕಲೆಕ್ಟಿವ್’ ಸಲ್ಲಿಸಿದ ಈ ಪತ್ರಕ್ಕೆ ಭಾರತ ಹಾಗೂ ವಿದೇಶದ ದಲಿತ ಹೋರಾಟಗಾರರು, ಶಿಕ್ಷಣ ತಜ್ಞರು, ಲೇಖಕರು, ಕಲಾವಿದರು, ಚಿತ್ರ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.

ಪಠ್ಯ ಕ್ರಮದಿಂದ ಈ ಸಾಹಿತ್ಯವನ್ನು ಕೈಬಿಟ್ಟಿರುವುದಕ್ಕೆ ಸಂಬಂಧಿಸಿ ಲೇಖಕರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯ ಕ್ಷಮೆ ಕೋರಬೇಕು ಎಂದು ಸಹಿದಾರರು ಆಗ್ರಹಿಸಿದ್ದಾರೆ.

‘‘ಈ ಸಾಹಿತ್ಯ ಪಠ್ಯಗಳು ರಾಜ್ಯದ ದಮನದ ವಿರುದ್ಧ ಆದಿವಾಸಿ ಮಹಿಳೆಯ ವಿರೋಧ, ಜಾತಿ ಸೋಂಕಿತ ಭಾರತೀಯ ಗ್ರಾಮಗಳಲ್ಲಿ ದಲಿತ ಮಹಿಳೆ ಎದುರಿಸುವ ತಾರತಮ್ಯ, ಅಮಾನವೀಯ ಮಲ ಹೊರುವ ಪದ್ಧತಿಯ ವಿರುದ್ಧ ಮಾತನಾಡುತ್ತವೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.

‘‘ಈ ಪಠ್ಯಗಳಿಂದ ಯಾರ ಭಾವನೆಗಳಿಗೆ ಘಾಸಿ ಉಂಟಾಗಿದೆ?’’ ಎಂದು ಪತ್ರ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News