ಕೋವಿಡ್-19 ಲಸಿಕೆ: ಸಾರ್ವಜನಿಕರ ಸಂದೇಹ ಬಗೆಹರಿಸಿದ ಉಡುಪಿ ಜಿಲ್ಲಾಧಿಕಾರಿ

Update: 2021-09-16 14:26 GMT

ಉಡುಪಿ, ಸೆ.16: ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿದ್ದ ಬಹಳಷ್ಟು ಸಂದೇಹ, ಸಮಸ್ಯೆ ಹಾಗೂ ಪ್ರಶ್ನೆಗಳನ್ನು ಮೊದಲ ಬಾರಿ ಫೋನ್‌ ಇನ್ ಕಾರ್ಯಕ್ರಮವನ್ನು ನಡೆಸುವ ಮೂಲಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಬಗೆಹರಿಸುವ ಪ್ರಯತ್ನ ನಡೆಸಿದರು. ಉಡುಪಿ ಮತ್ತು ಪಕ್ಕದ ದಕ್ಷಿಣ ಕನ್ನಡದ ನಾಗರಿಕರು ಇದಕ್ಕೆ ಉತ್ತಮ ಸ್ಪಂದನೆ ತೋರಿಸಿದರು.

ಇಂದು ಬೆಳಗ್ಗೆ 10ರಿಂದ 11ರವರೆಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ 27 ಮಂದಿ ಸಾರ್ವಜನಿಕರು ಕೋವಿಡ್ ಲಸಿಕೆ ಹಾಗೂ ಕೋವಿಡ್‌ಗೆ ಸಂಬಂಧಿಸಿದಂತೆ ತಮ್ಮಲ್ಲಿರುವ ಗೊಂದಲಗಳು ಮತ್ತು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಿಂದ ಮಾಹಿತಿಗಳನ್ನು ಕೇಳಿ ಪಡೆದರು.

ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸಬೇಕು, ಕೈಗಳ ಸ್ವಚ್ಚತೆ ಕಾಪಾಡಬೇಕು ಎಂದಿದೆ. ಮಾಸ್ಕ್ ಧರಿಸದ ಕಾರಣ ನಾನೂ ಸಹ ದಂಡ ಕಟ್ಟಿದ್ದೇನೆ. ಆದರೆ ಅನೇಕ ಮಂದಿ ಹೋಟೆಲ್‌ಗಳಲ್ಲಿ ಊಟ ಮಾಡಿದ ಪ್ಲೇಟ್‌ಗಳಲ್ಲಿ ಕೈ ತೊಳೆಯುತ್ತಾರೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಣಿಪಾಲದ ಮಾಧವ ಪೈ ಕರೆ ಮಾಡಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಹೋಟೆಲ್‌ಗಳಲ್ಲಿ ಸರಕಾರ ಸೂಚಿಸಿರುವ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸುವ ಕುರಿತಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಇಂದೇ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮೊದಲನೇ ಡೋಸ್ ಲಸಿಕೆ ಆಗಿದೆ, 2ನೇ ಡೋಸ್ ಪಡೆಯಲು ಮೆಸೇಜ್ ಬಂದಿಲ್ಲ, ನಾನು ಏನು ಮಾಡಬೇಕು ಎಂಬ ಸಾವಿತ್ರಿ ಅವರ ಸಂದೇಹಕ್ಕೆ, ಮೆಸೇಜ್ ಬರದೇ ಇದ್ದರೂ ಸಹ, ನಿಗದಿತ 84 ದಿನಗಳ ಅವಧಿ ಮುಗಿದಲ್ಲಿ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವಂತೆ ಡಿಸಿ ಹೇಳಿದರು.

ಮೊದಲ ಡೋಸ್ ಪಡೆದು 80 ದಿನ ಆಗಿದೆ ಮಹಾಮೇಳದಲ್ಲಿ ಲಸಿಕೆ ಪಡೆಯಬಹುದೇ ಎಂಬ ಮಂಗಳೂರಿನ ರಾಜೇಶ್ ಪ್ರಶ್ನೆಗೆ, ನಿಗದಿತ ಅವಧಿಗೆ ಮುಂಚೆ ಲಸಿಕೆ ಪಡೆಯಲು ಸಾಧ್ಯವಿಲ್ಲ. ಕೋವಿಡ್ ಆ್ಯಪ್‌ನಲ್ಲಿ ಕೂಡಾ ಇದಕ್ಕೆ ಅವಕಾಶವಿಲ್ಲ. ಆದ್ದರಿಂದ 84 ದಿನದ ನಂತರವೇ ಬಂದು ಲಸಿಕೆ ಪಡೆಯುವಂತೆ ಕೂರ್ಮಾರಾವ್ ತಿಳಿಸಿದರು.

ಟಿಬಿ ಇಂದ ಗುಣಮುಖನಾಗಿದ್ದು ಈಗ ಲಸಿಕೆ ಪಡೆಯಬಹುದೇ ಎಂಬ ಮರವಂತೆಯ ಪ್ರಕಾಶ್ ಎಂಬುವವರ ಪ್ರಶ್ನೆಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಧಾರ್ ಕಾರ್ಡ್‌ನೊಂದಿಗೆ ತೆರಳಿ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.

ಎರಡೂ ಡೋಸ್ ಲಸಿಕೆ ಪಡೆದಿದ್ದು, ಈ ಬಗ್ಗೆ ಸರ್ಟಿಫಿಕೇಟ್ ಸಹ ದೊರೆತಿದೆ. ಆದರೆ ಈಗಲೂ ಸಹ ಲಸಿಕೆ ಪಡಯುವಂತೆ ಮೆಸೇಜ್ ಬರುತ್ತಿದ್ದು, ಮತ್ತೆ ಲಸಿಕೆ ಪಡೆಯಬೇಕೇ ಎಂಬ ಚಿಟ್ಪಾಡಿಯ ಪವನ್‌ಕುಮಾರ್ ಎಂಬವರ ಪ್ರಶ್ನೆಗೆ, ಎರಡೂ ಡೋಸ್ ಲಸಿಕೆ ಆಗಿದ್ದರೆ ಮತ್ತೆ ಪಡೆಯುವುದು ಬೇಡ. ಎರಡನೇ ಡೋಸ್ ಪಡೆಯದವರಿಗೆ ಮೆಸೇಜ್ ಬರುತಿದ್ದು, ಈಗಾಗಲೇ ಪಡೆದಿದ್ದಲ್ಲಿ ಈ ಮೇಸೆಜ್‌ನ್ನು ನಿರ್ಲಕ್ಷಿಸಿ ಎಂದೂ ಅದರಲ್ಲಿ ಮಾಹಿತಿ ಇದೆ ಎಂದರು.

ಕಾಲೇಜು ವಿದ್ಯಾರ್ಥಿನಿ ಆತಂಕ: ಸಿದ್ದಾಪುರದ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ ಕರೆ ಮಾಡಿ, ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿ 3 ದಿನವಾಗಿದ್ದು ಇನ್ನೂ ವರದಿ ಸಿಕ್ಕಿಲ್ಲ. ಇದರಿಂದ ಕಾಲೇಜ್‌ಗೆ ತೆರಳಲು ತೊಂದರೆಯಾಗಿದೆ ಎಂದರು. ಕೂಡಲೇ ಇವರ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಸಾಸ್ತಾನದ ರಾಘವೇಂದ್ರ ಅಭಿನಂದನೆ ಸಲ್ಲಿಸಿದರು. ಸರಕಾರದ ಜೊತೆಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಜಿಲ್ಲೆಯಲ್ಲಿ ಶೇ.100 ಲಸಿಕಾಕರಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಲಸಿಕೆ ಪಡೆದಾಗ ಜ್ವರ ಬಂದರೆ ಒಳ್ಳೆಯದು ಇಲ್ಲವಾದಲ್ಲಿ ಲಸಿಕೆ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಇದು ನಿಜವೇ ಎಂಬ ಇಸ್ಮಾಯಿಲ್ ಎಂಬುವವರ ಪ್ರಶ್ನೆಗೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಲಸಿಕೆ ಪಡೆದಾಗ ಜ್ವರ ಬರುತ್ತದೆ, ಜ್ವರ ಬಂದಾಗ ರೋಗ ನಿರೋಧಕ ಶಕ್ತಿ ಬೆಳವಣಿಗೆ ಯಾಗುತ್ತಿರುತ್ತದೆ. ಅದರೆ ಇದೇ ವ್ಯಕ್ತಿ ಎರಡನೇ ಡೋಸ್ ಲಸಿಕೆ ಪಡೆದಾಗ ಜ್ವರ ಬರುವುದಿಲ್ಲ ಎಂದು ವಿಶ್ವ ಅರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನ್ ಕುಮಾರ್ ತಿಳಿಸಿರು.

ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡುವುದು ಕಡ್ಡಾಯ ವೇ ಎಂಬ ಕೊರಂಗ್ರಪಾಡಿಯ ಉದಯ್ ಪ್ರಶ್ನೆಗೆ, ಜ್ವರ, ಶೀತ, ನೆಗಡಿ ಇರುವವರು ಕೋವಿಡ್ ಪಾಸಿಟಿವ್ ಆಗಿರುವ ಸಾಧ್ಯತೆಗಳಿದ್ದು ಅಂತಹವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲದ ಕಾರಣ ಅದನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ತನ್ನ ಮಗನಿಗೆ ಪೆನ್ಸಿಲಿನ್ ಸೇರಿದಂತೆ ಯಾವುದೇ ಇಂಜೆಕ್ಷನ್ ಪಡೆದರೂ ಇನ್‌ಫೆಕ್ಷನ್ ಆಗಲಿದೆ. ಅವನು ಕೋವಿಡ್ ಲಸಿಕೆ ಪಡೆಯಬಹುದೇ ಎಂಬ ಶಾಜಿಯಾ ಉಡುಪಿ ಮತ್ತು ನನಗೆ ಹೃದಯದ ಸಮಸ್ಯೆ ಇದ್ದು, ಬ್ಲಾಕ್ ಆಗಿದೆ. ಶುಗರ್ ಮತ್ತು ಬಿಪಿ ಇದೆ ಲಸಿಕೆ ಪಡೆಯಬಹುದಾ ಎಂಬ ಶೋಭಿತಾ ಉಡುಪಿ ಅವರ ಪ್ರಶ್ನೆಗಳಿಗೆ, ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಹಾಗೂ ಜ್ವರ ಇದ್ದವರು ಗುಣಮುಖರಾದ ಬಳಿಕ ಮತ್ತು ಕೋವಿಡ್ ಪಾಸಿಟಿವ್ ಬಂದವರು 3 ತಿಂಗಳ ನಂತರ ಕೋವಿಡ್ ಲಸಿಕೆ ಪಡೆಯಬಹುದು ಎಂದು ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ಸೆ.17ರಂದು ಲಸಿಕಾ ಮೇಳ ನಡೆಯುವ ತಮ್ಮ ಸಮೀಪದ ಸ್ಥಳಗಳು, ಲಸಿಕೆ ಲಭ್ಯತೆಯ ವಿವರ, ಯಾರನ್ನು ಸಂಪರ್ಕಿಸಬೇಕು ಮುಂತಾದ ಮಾಹಿತಿಗಳಿಗಾಗಿ ಸಾರ್ವಜನಿಕರು ಮೊ.ಸಂ.:9663957222ಕ್ಕೆ ಕರೆ ಮಾಡಬಹುದಾಗಿದ್ದು, ಅಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರಗೆ, ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 3 ಗ್ರಾಪಂಗಳು ಶೇ.100 ಮೊದಲ ಡೋಸ್ ಲಸಿಕೆ ಸಾಧನೆ ಮಾಡಿದ್ದು, ಮಹಾಮೇಳದ ಮೂಲಕ ಇನ್ನೂ 20ಕ್ಕೂ ಹೆಚ್ಚು ಗ್ರಾಪಂ ಗಳು ಈ ಸಾಧನೆ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ.ಪ್ರೇಮಾನಂದ್, ಎನ್‌ಐಸಿಯ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.

18ರೊಳಗಿನ ಮಕ್ಕಳಿಗೂ ಸಿದ್ಧವಾಗಿದೆ 3 ಡೋಸ್‌ನ ಲಸಿಕೆ

18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಸಿದ್ಧತೆಗಳಾಗಿವೆ. ಈಗಾಗಲೇ ಮಕ್ಕಳಿಗೆ ನೀಡುವ ಲಸಿಕೆಯೂ ಸಿದ್ಧವಾಗಿದೆ. ಕೇಂದ್ರ ಸರಕಾರದ ಅನುಮೋದನ್ ದೊರೆತಾಕ್ಷಣ ದೇಶಾದ್ಯಂತ ಮಕ್ಕಳಿಗೂ ಲಸಿಕೆಯನ್ನು ನೀಡಲಾಗುವುದು ಎಂದು ವಿಶ್ವ ಅರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ಮಕ್ಕಳಿಗೆ ಲಸಿಕೆ ಮೂರು ಡೋಸ್‌ಗಳಾಗಿರುತ್ತವೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಹಾಗೂ 58 ದಿನಗಳ ಬಳಿಕ ಮೂರನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ. ಸರಕಾರದ ಹಸಿರುನಿಶಾನೆ ದೊರೆತಾಕ್ಷಣ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದರು.

ಎರಡು ಡೋಸ್ ಲಸಿಕೆ ಪಡೆದವರು ಸಹ ಸರಕಾರ ಸೂಚಿಸಿರುವ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ಪಡೆದ ಬಳಿಕ ಅವರೂ ಪಾಸಿಟಿವ್ ಬರಬಹುದು. ಆದರೆ ಅದು ತೀವ್ರತರವಾಗಿರುವುದಿಲ್ಲ, ಪ್ರಾಣಾಂತಿಕವಾಗಿರುವುದಿಲ್ಲ ಎಂದವರು ಹೇಳಿದರು. ಆದರೆ ಅವರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News