ಮಂಗಳ ಗಂಗೋತ್ರಿಯಲ್ಲಿ 'ತುಳು ಗ್ರಾಮ' ನಿರ್ಮಾಣ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

Update: 2021-09-22 16:57 GMT

ಮಂಗಳೂರು:ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಗಂಗೋತ್ರಿ ಆವರಣದಲ್ಲಿ ಮುಂದಿನ ಸಂಸ್ಥಾಪನಾ ದಿನದ ಒಳಗೆ 'ತುಳು ಗ್ರಾಮ'ವನ್ನು ನಿರ್ಮಾಣ ಮಾಡಲಾಗುವುದು ಎಂದು ಕುಲಪತಿ ಪ್ರೋ.ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

ಅವರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ 42 ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿರುವ ಎಸ್/ಎಸ್ಟಿ ಬ್ಯಾಕಾಲಾಗ್ ಹುದ್ದೆಗಳನ್ನು (ಹೈ-ಕ) ಮತ್ತು ಬೋಧಕ- ಬೋಧಕೇತರ ಖಾಲಿ ಹುದ್ದೆಗಳನ್ನು ಬರುವ ಜನವರಿಯೋಳಗೆ ಭರ್ತಿಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ. ಅಲ್ಲದೆ, ಬಾಕಿಯಿರುವ ಬೋಧಕ, ಬೋಧಕೇತರರ ಬಡ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಲಹೆಯಂತೆ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ʼತುಳುಗ್ರಾಮʼವನ್ನು ಅಭಿವೃದ್ಧಿಪಡಿಸಲಾಗುವುದು. ವಿಶ್ವವಿದ್ಯಾನಿಲಯದ ದ್ವಿಮುಖ ರಸ್ತೆಯ ಎರಡು ಬದಿ ಕಲಾಕೃತಿಗಳನ್ನು ನಿರ್ಮಿಸಲಾಗುವುದು ಎಂದರು. 

'ಮುಂದಿನ ತಿಂಗಳಿಂದಲೇ ಮಧ್ಯಾಹ್ನದ ಭೋಜನ'
ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಎಸ್ಸಿಎಸ್ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಲಯ ನಿರ್ಮಿಸಲಾಗುವುದು ಮತ್ತು ವಿದ್ಯಾರ್ಥಿಗಳಿಗೂ ಹಾಸ್ಟೆಲ್ ನಿರ್ಮಿಸಲಾಗುವುದು. ಅಂಬೇಡ್ಕರ್ ಭವನ, ಪರೀಕ್ಷಾ ಭವನ ನಿರ್ಮಾಣವಾಗಲಿದೆ. ಬೆಳಪು ವಿಜ್ಞಾನ ಕೇಂದ್ರದ ಕೆಲಸ ಮಾರ್ಚ್ ನಲ್ಲಿ ಮುಗಿಯಲಿದೆ. ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಆಚರಿಸುವ ಜೊತೆಗೆ, ಖಾಸಗಿ ಸಹಭಾಗಿತ್ವದ ಜೊತೆಗೆ ಕ್ರೀಡಾ ವಿಭಾಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು. ಮುಂದಿನ ತಿಂಗಳಿಂದಲೇ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಬೋಜನ ವ್ಯವಸ್ಥೆ ಆರಂಭವಾಗಲಿದೆ. ಕ್ಯಾಂಟೀನ್ 'ಫುಡ್ಕೋರ್ಟ್ʼ ಅಗಿ ಬದಲಾಗಲಿದೆ. ಕಡಿಮೆ ವೆಚ್ಚದ ಅತ್ಯುತ್ತಮ ಗುಣಮಟ್ಟದ ಲಾಂಡ್ರಿ ನಿರ್ಮಾಣವಾಗಲಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯ ಅನುಷ್ಠಾನದಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ಒತ್ತಡ ಹೇರದೆ, ಹಂತಹಂತವಾಗಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ ಎಂದರು. 

ಮುಖ್ಯ ಅತಿಥಿ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ ಜಿ ತಳವಾರ್ ಮಾತನಾಡಿ, ವಿದ್ಯಾರ್ಥಿಗಳ ಉದ್ಯೋಗಶೀಲತೆಗೆ ಈಗ ಸಂಸ್ಥೆಯ ರ್ಯಾಂಕಿಂಗ್ ಮತ್ತು ಸಾಮರ್ಥ್ಯವೇ ಬಂಡವಾಳ, ಎಂದರು. “ಎನ್ಇಪಿ- 2020 ಹಲವು ಪರಿಹಾರಗಳನ್ನು ನೀಡುತ್ತದೆ, ಆದರೆ ಅದರ ಅನುಷ್ಠಾನ ಸುಲಭವಿಲ್ಲ. ಶಿಕ್ಷಕರ ಮನಃಸ್ಥಿತಿಯೇ ಬದಲಾಗಬೇಕಿದೆ. ಗುಣಮಟ್ಟ, ಬದ್ಧತೆ ಮತ್ತು ಸಾಮರ್ಥ್ಯವೇ ಮೂಲಮಂತ್ರವಾಗಬೇಕು. ಶಿಕ್ಷಕರ ಪಾತ್ರ ಸಮಯದೊಂದಿಗೆ ಬದಲಾಗುತ್ತಲೇ ಇರುತ್ತದೆ,” ಎಂದರಲ್ಲದೆ ವಿಶ್ವವಿದ್ಯಾನಿಲಯದ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯರನ್ನು ನೆನಪಿಸಿಕೊಂಡರು. 

ಟಿಸಿಎಸ್ ಲಿಮಿಟೆಡ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಫ್. ಇಸ್ರೇಲ್ ಇನ್ಬರಾಜ್, ಸಾಮಾನ್ಯ ವ್ಯಕ್ತಿಯನ್ನು ಬೌದ್ಧಿಕ ಆಸ್ತಿಯನ್ನಾಗಿಸುವುದೇ ಶಿಕ್ಷಕ ವೃತ್ತಿಯ ವಿಶೇಷ. “ನಾವು ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿಯಲ್ಲ, ಬದಲಾಗಿ ಉದ್ಯೋಗದಾತರನ್ನಾಗಿಸಬೇಕು. ಜ್ಞಾನ ಪಡೆದುಕೊಂಡರಷ್ಟೇ ಸಾಲದು ಅದರ ಬಳಕೆಯ ಬಗ್ಗೆಯೂ ತಿಳಿದುಕೊಳ್ಳಬೇಕು,” ಎಂದು ಅಭಿಪ್ರಾಯಪಟ್ಟರು. 

ಶೈಕ್ಷಣಿಕ ಸಾಧನೆಗಾಗಿ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಯುಜಿಸಿ- ಬಿಎಸ್ಆರ್ ಫ್ಯಾಕಲ್ಟಿ ಡಾ. ಕೆ ಆರ್ ಶ್ರೀಧರ್, ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ಡಾ. ವಿಶಾಲಾಕ್ಷಿ ಬಿ ಹಾಗೂ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ ಹೆಚ್ ಶೇಖರ್ ಅವರನ್ನು ಸನ್ಮಾನಿಸಲಾಯಿತು. 2019-20 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡುವ  ʼಕರ್ನಾಟಕ ಕ್ರೀಡಾ ಪೋಷಕʼ ಪ್ರಶಸ್ತಿಯನ್ನು ಪಡೆದ  ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿʼಸೋಜ ಮತ್ತು ಸಹಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಪ್ರಶಸ್ತಿ ಗೆದ್ದ ಉಡುಪಿಯ ಎಂಜಿಎಂ ಕಾಲೇಜಿನ 12  ಮಂದಿ ವಿದ್ಯಾರ್ಥಿಗಳ ತಂಡವನ್ನು ಪ್ರಶಸ್ತಿ ಪತ್ರ, ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಲಾಯಿತು. 

ಪ್ರಾಧ್ಯಾಪಕರಾದ ಪ್ರೊ. ರವಿಶಂಕರ್ ರಾವ್ ಮತ್ತು ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ಹಣಕಾಸು ಅಧಿಕಾರಿ ಪ್ರೊ. ನಾರಾಯಣ ಬಿ, ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ಡೀನರುಗಳಾದ ಪ್ರೊ. ಮಂಜುನಾಥ ಪಟ್ಟಾಬಿ, ಪ್ರೊ. ಉದಯ ಬಿ ಮತ್ತು ಪ್ರೊ. ಮುನಿರಾಜು ವೈ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಮಂಜುಳಾ ಶಾಂತಾರಾಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News