ಇಬ್ಬರು ಮಕ್ಕಳ ಸಹಿತ ನಾಪತ್ತೆಯಾಗಿದ್ದ ಮಹಿಳೆ ಗದಗದಲ್ಲಿ ಪತ್ತೆ

Update: 2021-09-22 18:19 GMT

ಮಂಗಳೂರು, ಸೆ.22: ಅಶೋಕ ನಗರದಿಂದ ತನ್ನ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದ ಮಹಿಳೆ ತನ್ನ ಊರಾದ ಗದಗದಲ್ಲಿ ಪತ್ತೆಯಾಗಿದ್ದಾರೆ. ಮದುವೆಯಾಗದೆ ಜತೆಗೆ ವಾಸವಿದ್ದ ನಾಗರಾಜ ಹಾಲಪ್ಪ ಎಂಬಾತನ ಕಿರುಕುಳವೇ ನಾಪತ್ತೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

ಗದಗ ಮೂಲದ ರೇಣುಕಾ ಚೌಡಾಳ (30) ಮತ್ತು ಇಬ್ಬರು ಮಕ್ಕಳೊಂದಿಗೆ ಸೆ.18ರಂದು ಮನೆಯ ಸಾಮಗ್ರಿಗಳೊಂದಿಗೆ ನಾಪತ್ತೆಯಾಗಿದ್ದರು. ಈ ಸಂದರ್ಭ ನಾಗರಾಜ ಹಾಲಪ್ಪ ಊರಿಗೆ ಹೋಗಿದ್ದ. ಹಿಂತಿರುಗಿ ಬಂದಾಗ ಮನೆಯಲ್ಲಿ ಯಾರು ಇರಲಿಲ್ಲ. ಮನೆ ಮಾಲಕರಲ್ಲಿ ವಿಚಾರಿಸಿದಾಗ ಚಿಕ್ಕಮ್ಮನ ಮನೆಗೆ ಹೋಗಿರುವುದಾಗಿ ತಿಳಿಸಿದ್ದರು. ಎಲ್ಲ ಕಡೆ ಹುಡುಕಾಡಿದರೂ ಮಹಿಳೆ ಮತ್ತು ಮಕ್ಕಳು ಪತ್ತೆಯಾಗದ ಕಾರಣ ಉರ್ವ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಆಕೆಯನ್ನು ಹುಡುಕುತ್ತಾ ಹೋಗಿ ಗದಗದಲ್ಲಿ ಪತ್ತೆ ಮಾಡಿ, ಮಂಗಳೂರಿನಲ್ಲಿದ್ದ ಆತನನ್ನೂ ಕರೆಸಿ ವಿಚಾರಣೆ ನಡೆಸಿದಾಗ 'ಲಿವಿಂಗ್ ಟುಗೆದರ್' ವಿಚಾರ ಬಯಲಾಗಿದೆ. ಆತ ಆಕೆಯೊಂದಿಗೆ ವಾಸ ಮಾಡುತ್ತೇನೆ ಎಂದು ಹೇಳಿದ್ದು, ಆದರೆ ರೇಣುಕಾ ಮಾತ್ರ ಎಷ್ಟೇ ಕಷ್ಟ ಆದರೂ ನಾನೊಬ್ಬಳೇ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತೇನೆ. ಆತನೊಂದಿಗೆ ವಾಸ ಮಾಡುವುದಿಲ್ಲ ಎಂದು ಠಾಣೆಯಲ್ಲಿ ಹೇಳಿದ ಕಾರಣ ಅವರಿಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News