ಐಟಿಟಿಗಳ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ 5000 ಕೋಟಿ ರೂ. ವ್ಯಯ: ಸಚಿವ ಡಾ.ಅಶ್ವಥ ನಾರಾಯಣ

Update: 2021-09-25 14:48 GMT

ಉಡುಪಿ, ಸೆ. 25: ರಾಜ್ಯದಲ್ಲಿ 1200 ಸರಕಾರಿ ಮತ್ತು ಖಾಸಗಿ ಐಟಿಐ ಕಾಲೇಜುಗಳಿವೆ. 270 ಸರಕಾರಿ ಐಟಿಐ ಕಾಲೇಜುಗಳಲ್ಲಿ 150 ಐಟಿಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೆಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತುತಿ ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

5000 ಕೋಟಿ ರೂ.ನಲ್ಲಿ ಸರಕಾರ 1000 ಕೋಟಿ ವ್ಯಯ ಮಾಡಿದರೆ, ಉಳಿದ 4000 ಕೋಟಿ ರೂ.ವನ್ನು ಟಾಟಾ ಟೆಕ್ನಾಲಜಿಸ್ ಕಾನ್‌ಸಲ್ಟೋಯಿಂ ಭರಿಸಲಿದೆ. ಈ ಮೂಲಕ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಐ.ಟಿ.ಐ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ವಿಶ್ವ ದರ್ಜೆಯು ಅಡ್ವಾನ್ಸ್ ಕೈಗಾರಿಕಾ 4.0 ತಂತ್ರಜ್ಞಾನ ತರಬೇತಿ ನೀಡಲು ಅಗತ್ಯವಿರುವ ವರ್ಕ್‌ಶಾಪ್, ಡಿಸೈನ್ ಲ್ಯಾಬ್‌ಗಳ ನಿರ್ಮಾಣಕ್ಕೆ ಬಳಸಲಾಗುವುದು. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ 30 ಕೋಟಿ ರೂ ವೆಚ್ಚವಾಗಲಿದೆ. ಈ ಯೋಜನೆ ನ.2ರಂದು ಉದ್ಘಾಟನೆಗೊಳ್ಳ ಲಿದೆ ಎಂದರು.

ಇಡೀ ವಿಶ್ವಕ್ಕೆ ಏರೊಸ್ಪೇಸ್ ಉಪಕರಣ ಉತ್ಪಾದನೆಯಲ್ಲಿ ಕರ್ನಾಟಕ ನಂ 1 ಸ್ಥಾನ ಪಡೆದಿದ್ದು, ಭಾರತ ಸರಕಾರದಿಂದ ಈ ವರ್ಷ 3 ಲಕ್ಷ ಕೋಟಿ ಮೊತ್ತದ ಆರ್ಡರ್ ದೊರೆಯಲಿದೆ. ಇದಲ್ಲದೇ ಇತರೆ ಕಂಪೆನಿಗಳಿಂದಲೂ ಆರ್ಡರ್ ದೊರೆತಿದೆ. ಈ ಕಾರ್ಯಗಳನ್ನು ನಿರ್ವಹಿಸಲು ಕೌಶಲ್ಯಯುತ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಶಾಕ ಕೆ.ರಘುಪತಿ ಭಟ್ ವಹಿಸಿದ್ದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪ್ಪೂರು ಗ್ರಾಪಂ ಅಧ್ಯಕ್ಷ ಕೃಷ್ಣರಾಜ್ ಕೋಟ್ಯಾನ್, ಟೋಯೊಟಾ ಕಂಪೆನಿಯ ಅಧಿಕಾರಿ ರೋಶನ್ ಆರ್., ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಹ.ರಾಘವೇಂದ್ರ ಉಪಸ್ಥಿತರಿದ್ದರು.

ಮೈಸೂರು ಜಿಟಿಟಿಸಿ ವ್ಯವಸ್ಥಾಪಕ ಲಿಂಗರಾಜ ಸಣ್ಣಮನಿ ಸ್ವಾಗತಿಸಿದರು. ಉಪ್ಪೂರು ಜಿಟಿಟಿಸಿ ಪ್ರಾಂಶುಪಾಲ ಮಂಜುನಾಥ್ ನಾಯಕ ವಂದಿಸಿದರು.

ಜಿಟಿಸಿಸಿಯಿಂದ ಶೇ.100 ಉದ್ಯೋಗ

ರಾಜ್ಯದ ಬಿಜಾಪುರ ಹೊರತು ಪಡಿಸಿ ಉಳಿದ 28 ಜಿಲ್ಲೆಗಳಲ್ಲಿ ಜಿಟಿಟಿಸಿ ಸಂಸ್ಥೆಗಳಿದ್ದು, ಎರಡು ಜಿಲ್ಲೆಗಳಲ್ಲಿ ಸಂಸ್ಥೆ ನಿರ್ಮಾಣ ಹಂತದಲ್ಲಿದೆ. ಇದು ಇಂದು ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಇರುವ ಕೋರ್ಸ್ ಆಗಿದೆ. ದೀರ್ಘಾವಧಿಯಲ್ಲಿ 4500 ಹಾಗೂ ಅಲ್ಪಾವಧಿಯಲ್ಲಿ 6500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರೆಲ್ಲರಿಗೂ ಶೇ.100 ಉದ್ಯೋಗ ದೊರೆಯಲಿದೆ. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗಳಿಗೆ 21 ಶತಮಾನಕ್ಕೆ ಸಂಬಂಧಿಸಿದ ಕೈಗಾರಿಕಾ 4.0 ಹಾಗೂ ಅತ್ಯಾಧುನಿಕ ಎಮರ್ಜಿಂಗ್ ತಂತ್ರಜ್ಞಾನವನ್ನು ಕಲಿಸಲಾಗುತ್ತದೆ ಎಂದು ಸಚಿವ ಡಾ.ಅಶ್ವಥ್‌ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News