ಕೋವಿಡ್ ಲಸಿಕೆ ನೀಡದ ವೈದ್ಯನಿಗೆ ಕೊಡಲಿಯಿಂದ ಹಲ್ಲೆ!

Update: 2021-09-28 04:02 GMT
ಸಾಂದರ್ಭಿಕ ಚಿತ್ರ(Source: PTI)

ಯಾವತ್ಮಲ್ (ಮಹಾರಾಷ್ಟ್ರ), ಸೆ.28: ಸರದಿ ತಪ್ಪಿಸಿ ಬಂದ ವ್ಯಕ್ತಿಗೆ ಕೋವಿಡ್-19 ಲಸಿಕೆ ನೀಡಲು ನಿರಾಕರಿಸಿದ ವೈದ್ಯರ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ಹಲ್ಲೆ ಮಾಡಿದ ವಿಚಿತ್ರ ಘಟನೆ ಸೋಮವಾರ ವರದಿಯಾಗಿದೆ. 32 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಲಾಗಿದೆ.

ಕೋವಿಡ್-19 ಲಸಿಕೆ ಪಡೆಯಲು ಸರದಿಯಲ್ಲಿ ಕಾಯುತ್ತಿದ್ದ ವ್ಯಕ್ತಿ ಸರದಿ ಉಲ್ಲಂಘಿಸಿ ತನಗೇ ಮೊದಲು ಲಸಿಕೆ ನೀಡಬೇಕು ಎಂದು ಆಗ್ರಹಿಸಿದಾಗ ವೈದ್ಯರು ನಿರಾಕರಿಸಿದರು. ಇದರಿಂದ ಕೋಪಗೊಂಡ ವ್ಯಕ್ತಿ ವೈದ್ಯರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ದಿಗ್ರಾಸ್ ಠಾಣೆ ವ್ಯಾಪ್ತಿಯ ವಸಂತನಗರ ಎಂಬಲ್ಲಿ ಈ ಘಟನೆ ನಡೆದಿದೆ. ವೈದ್ಯರಿಗೆ ಯಾವುದೇ ಅಪಾಯ ಆಗಿಲ್ಲ.

"ಆರೋಪಿ ಮನೋಹರ ರಾಥೋಡ್ ಎಂಬಾತ ಸರದಿ ತಪ್ಪಿಸಿ ಮಧ್ಯಕ್ಕೆ ಬಂದು ತಕ್ಷಣ ಲಸಿಕೆ ನೀಡುವಂತೆ ಆಗ್ರಹಿಸಿದ್ದಾನೆ. ವೈದ್ಯ ಡಾ.ಸಂತೋಷ್ ಜಾಧವ್ ಇದಕ್ಕೆ ನಿರಾಕರಿಸಿ, ಮೊದಲು ನೋಂದಾಯಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಜಾಧವ್ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಅದರೆ ವೈದ್ಯರು ತಕ್ಷಣ ಹಿಂದೆ ಸರಿದ ಕಾರಣ ಪ್ರಾಣಾಪಾಯದಿಂದ ಪಾರಾದರು" ಎಂದು ಪೊಲೀಸರು ವಿವರಿಸಿದ್ದಾರೆ.
ಜಾಧವ್ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News