ಪಡುಬಿದ್ರೆ : ಮನೆಗೆ ನುಗ್ಗಿ ಚಿನ್ನಾಭರಣ ಕಳವು
Update: 2021-10-11 16:15 GMT
ಪಡುಬಿದ್ರಿ: ಇಲ್ಲಿನ ಕಾಡಿಪಟ್ಣ ಬಳಿಯ ಮನೆಯೊಂದಕ್ಕೆ ಮನೆಯ ಕಿಟಿಕಿ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಕವಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಲ್ಲಿನ ಠಾಣೆ ವ್ಯಾಪ್ತಿಯ ಕಾಡಿಪಟ್ಣ ಬಳಿ ನಡೆದಿದೆ.
ಅರುಣಾ ಭಾಸ್ಕರ್ ಎಂಬವರ ಭ್ರಾಮರಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 5 ಪವನ್ ತೂಕದ ಕರಿಮಣಿ ಸರ, 5 ಪವನ್ ತೂಕದ ಹವಳ ಸರ, ಕಿವಿಯೋಲೆ, 2 ಉಂಗುರ, 3 ಮೂಗುತಿಗಳು ಸೇರಿ ಒಟ್ಟು 12 ಪವನ್ ಚಿನ್ನ ಕಳವಾಗಿರುವುದು ಬೆಳಕಿಗೆ ಬಂದಿದೆ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಅರುಣಾ ದೇವಾಡಿಗರು ಚಿನ್ನಾಭರಣಗಳನ್ನು ಪಡುಬಿದ್ರಿಯ ಖಾಸಗಿ ಬ್ಯಾಂಕ್ನಲ್ಲಿ ಅಡವಿರಿಸಿದ್ದು, ವಿಮಾ ಯೋಜನೆಯ ಹಣ ದೊರೆತ ಹಿನ್ನೆಲೆಯಲ್ಲಿ ನಾಲ್ಕು ದಿನದ ಹಿಂದೆಯಷ್ಟೇ ಚಿನ್ನಾಭರಣಗಳನ್ನು ಬಿಡಿಸಿ ಮನೆಯಲ್ಲಿ ತಂದಿರಿಸಿದ್ದರು. ಪಡುಬಿದ್ರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಶ್ವಾನದಳ, ಬೆರಳಚ್ಚು ತಜ್ಷರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.