ಹತ್ಯೆ ಪ್ರಕರಣ: ಗುರ್ಮೀತ್ ರಾಮ್ ರಹೀಂ ಶಿಕ್ಷೆ ಘೋಷಣೆ ಅ. 18ಕ್ಕೆ ಮುಂದೂಡಿಕೆ
ಚಂಡಿಗಢ, ಅ. 12: ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಹಾಗೂ ಇತರ ನಾಲ್ವರ ಶಿಕ್ಷೆಯ ಪ್ರಮಾಣ ಘೋಷಣೆಯನ್ನು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಇಂದು ಅಕ್ಟೋಬರ್ 18ಕ್ಕೆ ಮುಂದೂಡಿದೆ.
ದೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆ ಪ್ರಕರಣದದಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್ ಹಾಗೂ ಇತರ ನಾಲ್ವರನ್ನು ವಿಶೇಷ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ದೋಷಿಗಳೆಂದು ಪರಿಗಣಿತರಾದ ಇತರರೆಂದರೆ ಕೃಷ್ಣ ಲಾಲ್, ಜಸ್ಬೀರ್ ಸಿಂಗ್, ಅವತಾರ್ ಸಿಂಗ್ ಹಾಗೂ ಸಬ್ದಿಲ್. ಶಿಕ್ಷೆಯ ಪ್ರಮಾಣದ ಬಗ್ಗೆ ಸಿಬಿಐ ಹಾಗೂ ಪ್ರತಿವಾದಿ ವಕೀಲರಿಂದ ವಾದ-ಪ್ರತಿವಾದ ಪೂರ್ಣಗೊಂಡಿದೆ.
ಪ್ರಾಸಿಕ್ಯೂಷನ್ ಮಂಡಿಸಿದ ವಾದವನ್ನು ಪರಿಶೀಲಿಸಲು ಸಮಯಾವಕಾಶ ನೀಡುವಂತೆ ದೋಷಿಗಳ ಪರ ವಕೀಲರು ಕೋರಿದ್ದರು. ಅವರ ಮನವಿಯಂತೆ ನ್ಯಾಯಾಲಯ ಪ್ರಕರಣದ ಶಿಕ್ಷೆಯ ಪ್ರಮಾಣ ಪ್ರಕಟವನ್ನು ಅಕ್ಟೋಬರ್ 18ಕ್ಕೆ ಮುಂದೂಡಿದೆ ಎಂದು ಸಿಬಿಐಯ ವಿಶೇಷ ನ್ಯಾಯವಾದಿ ಎಚ್.ಪಿ.ಎಸ್. ವರ್ಮಾ ತಿಳಿಸಿದ್ದಾರೆ.