ಕಾರ್ಕಳ: ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ನಳೀನ್ ಕುಮಾರ್ ಕಟೀಲ್ ವಿರುದ್ಧ ಖಂಡನಾ ನಿರ್ಣಯ

Update: 2021-10-21 06:23 GMT

ಕಾರ್ಕಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಇತ್ತೀಚೆಗೆ ದುರುದ್ದೇಶಪೂರಿತ ಅವಹೇಳನಕಾರಿ ಹೇಳಿಕೆ ನೀಡಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ನಡೆದ ಹೆಬ್ರಿ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಇತಿಹಾಸ ತಿಳಿಯದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ತನ್ನ ನೈಜ ಯೋಗ್ಯತೆಗೆ ಮಿಕ್ಕಿದ  ಹುದ್ದೆಯ ಅಮಲಿನಲ್ಲಿ ಜಗತ್ತೆಲ್ಲ ಡ್ರಗ್ ಎಡಿಕ್ಟ್ ಆದಂತೆ ಕಾಣುವ ಅಪ್ರಬುದ್ಧ ಮನಸ್ಥಿತಿಯ ಬಿಜೆಪಿ ರಾಜ್ಯಾದ್ಯಕ್ಷರಿಗೆ ನೆಹರೂ ಕುಟುಂಬದ ಹಿನ್ನೆಲೆ ತಿಳಿದಿಲ್ಲ. ಮಹಾತ್ಮಾ ಗಾಂಧೀ ತತ್ವ ಸಿದ್ಧಾಂತದಡಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಪ್ರಜಾತಂತ್ರಕ್ಕೊಪ್ಪುವ ರಾಜನೀತಿಯ ನಡೆಯ, ಓಕ್ಸ್ವಡ್೯ ಶಿಕ್ಷಣವೇತ್ತ ರಾಹುಲ್ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ಈ ಕಟೀಲಿಗಿಲ್ಲ. ಇಂತಹ ಬೇಜವಾಬ್ಧಾರಿ  ಹೇಳಿಕೆಗಳು ಮುಂದುವರಿದಲ್ಲಿ ಇವರ ವಿರುದ್ಧ ಕಾನೂನಾತ್ಮಕ ಕ್ರಮ  ಕೈಗೊಳ್ಳಲಾಗುತ್ತದೆ ಎನ್ನುವ  ಖಂಡನಾ ನಿರ್ಣಯವನ್ನು ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರ ಸಮಕ್ಷಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಂಡಿಸಿದರು. ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ ಅನುಮೋದಿಸಿದರು.

ಜಿಲ್ಲಾ ಉಪಾಧ್ಯಕ್ಷ  ಸುಧಾಕರ ಕೋಟ್ಯಾನ್, ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ  ದೀಪಕ್ ಕೋಟ್ಯಾನ್, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News