ಭಟ್ಕಳ: ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಜಾಥಾ

Update: 2021-10-24 16:05 GMT

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯಿತಿಯಲ್ಲಿ ಕ್ಲೀನ್ ಇಂಡಿಯಾ, ಅಝಾದಿ ಕಾ ಅಮೃತ್ ಮಹೋತ್ಸವ ಹಾಗೂ ಸ್ವಚ್ಛತಾ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ, ಏಕಬಳಕೆ ಪ್ಲಾಸ್ಟಿಕ್‍ಗಳನ್ನು ಕಡ್ಡಾಯವಾಗಿ ನಿಷೇಧಿಸುವ ಹಾಗೂ ಕಸ ವಿಂಗಡಣೆ ಕುರಿತು ಅಂಗಡಿಕಾರರ ಸಭೆ ನಡೆಸಿ ಜನ ಜಾಗೃತಿ ಜಾಥಾವನ್ನು ನಡೆಸಲಾಯಿತು. 

ಅಂಗಡಿಕಾರರ ಸಭೆಯಲ್ಲಿ ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಚೀಲ ಬಳಕೆ ಪ್ರೋತ್ಸಾಹಿಸುವ ನಿಮಿತ್ತ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಅಂಗಡಿಕಾರರು ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಿರಾಲಿ ಗ್ರಾಮ ಪಂಚಾಯತ್‍ ದಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಕೆಟ್‍ನಲ್ಲಿ ಮೆರವಣೆಗೆ ನಡೆಯಿತು.

ಜಾಥಾದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ರವಿಶಂಕರ ನಾಯ್ಕ, ಉಪಾಧ್ಯಕ್ಷ ಭಾಸ್ಕರ ದೈಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಗೊಂಡ, ಅಭಿವೃದ್ಧಿ ಅಧಿಕಾರಿ ಮಹೇಶ ಎಸ್. ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರು, ನಾಗರೀಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಸ್ವ ಸಹಾಯ ಸಂಘದ ಪ್ರತಿನಿಧಿಗಳು, ಅಂಗಡಿಕಾರರು ಭಾಗವಹಿಸಿದ್ದರು. ವಿಶೇಷವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ, ಕ್ಲೀನ್ ಇಂಡಿಯಾ, ಆಝಾದಿ ಕಾ ಅಮೃತ್ ಮಹೋತ್ಸವ ಇತ್ಯಾದಿ ವಿಷಯಗಳನ್ನೊಳಗೊಂಡ ಕರ ಪತ್ರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News