ಕೂಳೂರು ನಾಗಬನ ಅಪವಿತ್ರಗೊಳಿಸಿರುವ ಘಟನೆ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

Update: 2021-10-24 16:47 GMT

ಮಂಗಳೂರು, ಅ.24: ಕೂಳೂರು ನಾಗಬನ ದುಷ್ಕರ್ಮಿಗಳು ಅಪವಿತ್ರಗೊಳಿಸಿರುವುದನ್ನು ಖಂಡಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಕೂಳೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕದಡುವ ಘಟನೆಗಳು ಹೆಚ್ಚುತ್ತಿದ್ದು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಮೂಲಕ ಕೋಮು ವೈಷಮ್ಯ ಸೃಷ್ಟಿಸುವ ಕಾರ್ಯ ಖಂಡನೀಯ. ಇತ್ತೀಚೆಗೆ ಕೋಮು ಉದ್ರೇಕಕಾರಿ ಭಾಷಣಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದ್ದು, ಇದರ ಪ್ರತಿಕ್ರಿಯೆಯಾಗಿ ಅಶಾಂತಿ ಸೃಷ್ಟಿಸುವ ಕೃತ್ಯಗಳು ನಡೆಯುತ್ತಿವೆ ಎಂದು ಆಪಾದಿಸಿದರು.

ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಕೂಳೂರು ಕಾವೂರು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚೂರಿ ಇರಿತ, ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ನಾಗಬನ ಅಪವಿತ್ರ ಪ್ರಕರಣ ಜನರಲ್ಲಿ ಭಯ ಹಾಗೂ ಅಪನಂಬಿಕೆ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ಪರಿಸರ ವ್ಯಾಪ್ತಿಯಲ್ಲಿ ಗಾಂಜಾ, ಮಾದಕ ವ್ಯಸನಿಗಳ ಹಾವಳಿ ತೀವ್ರವಾಗಿದೆ ಎಂದರು.

ಪ್ರತಿಭಟನೆಯಲ್ಲಿ ನವೀನ್ ಕೊಂಚಾಡಿ, ಅನಿಲ್ ಡಿಸೋಜ, ಬಶೀರ್ ಅಹ್ಮದ್, ಶರೀಫ್, ಸೌಮ್ಯ, ಪ್ರಮೀಳಾ, ನವೀನ್ ಡಿಸೋಜ, ಆಶಾ ಬೋಳೋರ್, ಮುಸ್ತಾಫ, ನೌಶಾದ್, ಹನುಮಂತ, ನಿತಿನ್ ಬಂಗೇರ ಇನ್ನಿತರರು ಭಾಗವಹಿಸಿದ್ದರು. ಚರಣ್ ಶೆಟ್ಟಿ ಸ್ವಾಗತಿಸಿ, ಸಂತೋಷ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News