ಬೆಳ್ತಂಗಡಿ; ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು
ಬೆಳ್ತಂಗಡಿ; ವೇಣೂರು ಸ್ವಸ್ತಿಕ್ ನಗರದ ನಿವಾಸಿ ಚಂದ್ರಶೇಖರ (21) ಎಂಬ ಯುವಕ ಇಲ್ಲಿಯ ಫಲ್ಗುಣಿ ನದಿ ನೀರಿನಲ್ಲಿ ಮುಳುಗಿ ಬುಧವಾರ ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಚಂದ್ರಶೇಖರ ಕಳೆದೊಂದು ವರ್ಷದಿಂದ ವೇಣೂರು ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ಶಾಮಿಯಾನ ಅಂಗಡಿಯ ಇತರರೊಂದಿಗೆ ಇಲ್ಲಿಯ ಫಲ್ಗುಣಿ ನದಿಯ ಬಳಿ ಶಾಮಿಯಾನದ ಮ್ಯಾಟ್ ತೊಳೆಯಲೆಂದು ನದಿಗೆ ತೆರಳಿದ್ದರು. ಈ ಸಂದರ್ಭ ಚಂದ್ರಶೇಖರ ಅವರು ನೀರಿನ ಸೆಳೆತಕ್ಕೆ ಸಿಲುಕಿದರು ಎನ್ನಲಾಗಿದೆ.
ಜತೆಗಿದ್ದ ವಿಕ್ರಂ, ಸಿದ್ದಿಕ್ ಹಾಗೂ ರವಿ ಅವರು ನೀರಿನ ಸೆಳೆತಕ್ಕೆ ಸಿಲುಕಿ ಒದ್ದಾಡುತ್ತಿದ್ದ ಚಂದ್ರಶೇಖರರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ವೇಣೂರು ಪೊಲೀಸರು, ಬೆಳ್ತಂಗಡಿ ಅಗ್ನಿಶಾಮಕ ದಳ ಹಾಗೂ ಬಂಟ್ವಾಳದ ಮುಳುಗು ತಜ್ಞರು ಜಂಟಿ ಕಾರ್ಯಾಚರಣೆ ನಡೆಸಿ ಸ್ಥಳೀಯರ ಸಹಕಾರದಲ್ಲಿ ಚಂದ್ರಶೇಖರ ಅವರ ಮೃತದೇಹವನ್ನು ಮೇಲಕ್ಕೆತ್ತಲಾಯಿತು.
ಆನಂದ ಅವರು ನೀಡಿದ ದೂರಿನಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ