ರಸ್ತೆಗಳು ಮುಕ್ತವಾದರೆ, ನಾವು ಬೆಳೆ ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ: ರಾಕೇಶ್ ಟಿಕಾಯತ್

Update: 2021-10-29 17:47 GMT

ಗಾಝಿಪುರ, ಅ. 29: ಕೇಂದ್ರ ಸರಕಾರದ ಕೃಷಿ ಕಾಯ್ದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಗಾಝಿಪುರ ಗಡಿಯಿಂದ ಬ್ಯಾರಿಕೇಡ್ಗಳನ್ನು ದಿಲ್ಲಿ ಪೊಲೀಸರು ತೆರವುಗೊಳಿಸಿರುವುದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ವಕ್ತಾರ ರಾಕೇಶ್ ಟಿಕಾಯತ್, ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್ತಿಗೆ ತೆರಳಿದ್ದೇವೆ ಎಂದಿದ್ದಾರೆ.
ರಸ್ತೆಯನ್ನು ಮುಕ್ತಗೊಳಿಸಿದರೆ, ನಾವು ದಿಲ್ಲಿಗೆ ಹೋಗಲಿದ್ದೇವೆ. ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

‘‘ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಿ ಅವರು ಹೇಳಿದ್ದಾರೆ. ಇನ್ನು ಮಾರಾಟವಾಗದ ಬೆಳೆಗಳನ್ನು ಎಲ್ಲಿ ಮಾರಾಟ ಮಾಡಬಹುದು ಎಂದು ನಾವು ಈಗ ರೈತರಿಗೆ ತಿಳಿಸಲಿದ್ದೇವೆ ’’ ಎಂದು ಅವರು ಹೇಳಿದ್ದಾರೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ಪ್ರತಿಭಟನೆ ಕುರಿತು ನಿರ್ಧರಿಸಲಿದೆ ಎಂದು ಅವರು ತಿಳಿಸಿದ್ದಾರೆ.

‘‘ಅವರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಈಗ ಅವರೇ ತೆರೆದಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಹಾಗೂ ಅದರಂತೆ ನಾವು ಮುಂದುವರಿಯಲಿದ್ದೇವೆ. ದಿಲ್ಲಿಗೆ ಹೋಗಲು ಅನುಮತಿ ನೀಡುವಂತೆ ನಾವು ಕಳೆದ 11 ತಿಂಗಳಿಂದ ಧರಣಿ ಕುಳಿತಿದ್ದೇವೆ. ಆದರೆ, ನಮಗೆ ಅವಕಾಶ ನೀಡಿರಲಿಲ್ಲ. ಈಗ ನಾವು ನಮ್ಮ ಬೆಳೆಯನ್ನು ಮಾರಾಟ ಮಾಡಲು ದಿಲ್ಲಿಗೆ ಹೋಗಲಿದ್ದೇವೆ. ಮೊದಲು ನಮ್ಮ ಟ್ರಾಕ್ಟರ್ ದಿಲ್ಲಿಗೆ ಹೋಗಲಿದೆ’’ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

 ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಹಾಗೂ ಗಾಝಿಪುರ ಗಡಿಯಲ್ಲಿ ಇರಿಸಿದ್ದ ಬ್ಯಾರಿಕೇಡ್ಗಳನ್ನು ತೆಗೆಯಲು ದಿಲ್ಲಿ ಪೊಲೀಸರು ಗುರುವಾರ ರಾತ್ರಿಯಿಂದ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News