"ಶಾರುಖ್ ಮ್ಯಾನೇಜರ್ ನ ಕರೆ ವಿವರ ಮಾಹಿತಿ ನೀಡಲು 5 ಲಕ್ಷ ರೂ. ಆಫರ್ ಮಾಡಲಾಗಿತ್ತು"
ಮುಂಬೈ: ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಅವರ ಕರೆ ವಿವರ ಮಾಹಿತಿಗಳನ್ನು ನೀಡಲು ತಮಗೆ ರೂ. 5 ಲಕ್ಷ ಆಫರ್ ಮಾಡಲಾಗಿತ್ತು ಎಂದು ಹೇಳಿಕೊಂಡು ಎಥಿಕಲ್ ಹ್ಯಾಕರ್ ಒಬ್ಬರು ಮುಂಬೈ ಪೊಲೀಸರನ್ನು ಅಕ್ಟೋಬರ್ 27ರಂದು ಸಂಪರ್ಕಿಸಿದ್ದಾರೆ ಎಂದು timesofindia ವರದಿ ಮಾಡಿದೆ.
ಮನೀಶ್ ಭಂಗಲೆ ಎಂಬ ಈ ಎಥಿಕಲ್ ಹ್ಯಾಕರ್ ಅವರು ಮುಂಬೈ ಪೊಲೀಸ್ ಆಯುಕ್ತಾಲಯಕ್ಕೆ ಪತ್ರ ಬರೆದಿದ್ದಾರೆ ಹಾಗೂ ತಮ್ಮನ್ನು ಅಕ್ಟೋಬರ್ 6ರಂದು ಅಲೋಕ್ ಜೈನ್ ಹಾಗೂ ಶೈಲೇಶ್ ಚೌಧುರಿ ಎಂಬ ಇಬ್ಬರು ವ್ಯಕ್ತಿಗಳು ಸಂಪರ್ಕಿಸಿ, ಶಾರುಖ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಅವರ ದೂರವಾಣಿ ಸಂಖ್ಯೆ ಸಹಿತ ಕೆಲವು ಇತರ ಸಂಖ್ಯೆಗಳ ಕರೆ ವಿವರ ಮಾಹಿತಿ ಒದಗಿಸುವಂತೆ ಕೋರಿದ್ದರು ಎಂದು ಹೇಳಿದ್ದಾರೆ.
ಆ ಇಬ್ಬರು ವ್ಯಕ್ತಿಗಳು ತಮಗೆ ಆರ್ಯನ್ ಖಾನ್ ಚಾಟ್ ಎಂದು ಹೆಸರಿಸಲಾಗಿದ್ದ ವಾಟ್ಸ್ಯಾಪ್ ಚಾಟ್ ಬ್ಯಾಕ್ ಅಪ್ ಫೈಲ್ ತೋರಿಸಿದರಲ್ಲದೆ ಪ್ರಭಾಕರ್ ಸೈಲ್ ಹೆಸರಿನ ಡಮ್ಮಿ ಸಿಮ್ ಕಾರ್ಡ್ ಒದಗಿಸುವಂತೆಯೂ ಹೇಳಿದ್ದರು ಎಂದು ಮನೀಶ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಆದರೆ ಈ ಆಫರ್ ಗೆ ತಾವು ಒಪ್ಪಿಗೆ ನೀಡಿರಲಿಲ್ಲ ಎಂದು ಮನೀಶ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪ್ರಭಾಕರ್ ಸೈಲ್ ಸುದ್ದಿಯಲ್ಲಿದ್ದುದರಿಂದ ತಾವು ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾಗಿಯೂ ಮನೀಶ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.