×
Ad

'ದಿಲ್ಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರ ಹಾಕಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ '

Update: 2021-10-31 11:49 IST

ಹೊಸದಿಲ್ಲಿ:ದಿಲ್ಲಿಯ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರ ಹಾಕಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರು ದೇಶಾದ್ಯಂತ ಸರಕಾರಿ ಕಚೇರಿಗಳನ್ನು "ಗಲ್ಲಾ ಮಂಡಿಗಳು" (ಧಾನ್ಯ ಮಾರುಕಟ್ಟೆಗಳು) ಆಗಿ ಪರಿವರ್ತಿಸುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥರು ಹೇಳಿದರು.

ರೈತರನ್ನು ಬಲವಂತವಾಗಿ ಗಡಿಯಿಂದ ಹೊರ ಹಾಕುವ ಪ್ರಯತ್ನ ನಡೆದರೆ ದೇಶಾದ್ಯಂತ ಇರುವ ಸರಕಾರಿ ಕಚೇರಿಗಳನ್ನು ಗಲ್ಲಾ ಮಂಡಿಯನ್ನಾಗಿ ಪರಿವರ್ತಿಸುತ್ತಾರೆ ಎಂದು ಟ್ವಿಟರ್‌ನಲ್ಲಿ ಟಿಕಾಯತ್ ಎಚ್ಚರಿಸಿದ್ದಾರೆ.

ದಿಲ್ಲಿ ಪೊಲೀಸರು ಗಾಝಿಪುರ ಹಾಗೂ  ಟಿಕ್ರಿ ಗಡಿಯಿಂದ ಸಿಮೆಂಟ್ ಬ್ಲಾಕ್‌ಗಳು ಮತ್ತು ಬ್ಯಾರಿಕೇಡ್‌ಗಳನ್ನು ತೆಗೆದ ಎರಡು ದಿನಗಳ ನಂತರ ಟಿಕಾಯತ್ ಅವರ ಹೇಳಿಕೆ ಬಂದಿದೆ.

ನವೆಂಬರ್ 26, 2020 ರಿಂದ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸಾವಿರಾರು ರೈತರು ಟಿಕ್ರಿ, ಸಿಂಘು ಹಾಗೂ ಗಾಝಿಪುರದ ಮೂರು ಗಡಿ ಬಿಂದುಗಳಲ್ಲಿ ಬೀಡುಬಿಟ್ಟಿದ್ದಾರೆ.

ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಾನಿರತ ರೈತರು ಪ್ರತಿಪಾದಿಸುತ್ತಿದ್ದರೆ, ಕೇಂದ್ರವು ಈ ಕಾನೂನುಗಳು ರೈತ ಪರ ಎಂದು ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News