ಬ್ರಹ್ಮಾವರ: ಸೀತಾನದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

Update: 2021-11-09 07:26 GMT
ಸಾಂದರ್ಭಿಕ ಚಿತ್ರ

ಬ್ರಹ್ಮಾವರ, ನ. 9: ಪೆಜಮಂಗೂರು ಗ್ರಾಮದ ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ ಸೀತಾನದಿಯಲ್ಲಿ ಸೋಮವಾರ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನವಜಾತ ಶಿಶುವಿನ ಮೃತದೇಹ ನದಿನಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಆ ಮಗುವು ಗಂಡು ಶಿಶು ಆಗಿರುವುದು ತಿಳಿದುಬಂತು.

ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿ ಇತ್ತೆನ್ನಲಾಗಿದೆ. ಅಲ್ಲದೇ ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತದೇಹದೊಂದಿಗೆ ಇತ್ತು. ಮಗುವಿನ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಮಗುವಿನ ವಾರಿಸುದಾರರು ಪತ್ತೆಯಾಗಿಲ್ಲ. ಈ ಮಗು ಜನನ ತರುವಾಯ ಅಥವಾ ಜನನ ಕಾಲದಲ್ಲಿ ವಾರಿಸುದಾರರು ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡುವ ಸಲುವಾಗಿ 2-3 ದಿನಗಳ ಹಿಂದೆ ಸೀತಾನದಿ ಹೊಳೆಯ ನೀರಿಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News