ಉತ್ತರಪ್ರದೇಶದಲ್ಲಿ ಪ್ರತಿಭಟನೆ ತೀವ್ರಗೊಳಿಸಲಿದ್ದೇವೆ: ರಾಕೇಶ್ ಟಿಕಾಯತ್
Update: 2021-11-09 17:48 GMT
ಹೊಸದಿಲ್ಲಿ, ನ. 9: ವಿಧಾನ ಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶದ ಪೂರ್ವಾಂಚಲ್ನಲ್ಲಿ ರೈತರ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ರಾಕೇಶ್ ಟಿಕಾಯತ್ ಮಂಗಳವಾರ ತಿಳಿಸಿದ್ದಾರೆ. ಲಕ್ನೋದಲ್ಲಿ ನವೆಂಬರ್ 22ರಂದು ನಡೆಯಲಿರುವ ಕಿಸಾನ್ ಮಹಾ ಪಂಚಾಯತ್ ಚಾರಿತ್ರಿಕವಾಗಿರಲಿದೆ. ಇದು ರೈತ ವಿರೋಧಿ ಕೇಂದ್ರ ಸರಕಾರ ಹಾಗೂ ಮೂರು ಕರಾಳ ಕೃಷಿ ಕಾಯ್ದೆಗಳ ಶವ ಪೆಟ್ಟಿಗೆಗೆ ಅಂತಿಮ ಮೊಳೆಯಾಗಿರಲಿದೆ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಅವರು ಟ್ರಾಕ್ಟರ್ ಮೂಲಕ ದಿಲ್ಲಿ ಗಡಿಯನ್ನು ತಲುಪುವ ಮೂಲಕ ನವೆಂಬರ್ 27ರಿಂದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದಾರೆ ಎಂದಿದ್ದರು. ಪ್ರತಿಭಟನಾ ಸ್ಥಳದಲ್ಲಿರುವ ರೈತರ ಡೇರೆಗಳನ್ನು ಆಡಳಿತ ಕೆಡವಿದರೆ, ಅವರು ಪೊಲೀಸ್ ಠಾಣೆ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಚೇರಿಯಲ್ಲಿ ಡೇರೆ ಹಾಕಲಿದ್ದಾರೆ ಎಂದು ಟಿಕಾಯತ್ ಕಳೆದ ತಿಂಗಳು ಅವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.