ನಮ್ಮ ಮಕ್ಕಳು ಹಾಗೂ ಸಮಾನ ಶಿಕ್ಷಣದ ಕನಸು

Update: 2021-11-14 06:27 GMT

ಸಮಾನತೆಯನ್ನು ಸಾಧಿಸಲು ಸಮಾನಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಆದರೆ ಸಮಾನ ಶಿಕ್ಷಣದ ಕುರಿತ ಎಲ್ಲಾ ನೀತಿ, ಆಯೋಗಗಳ ಸಲಹೆಗಳನ್ನೂ ನಿರ್ಲಕ್ಷಿಸಿ ಸರಕಾರ ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಖಾಸಗಿಯವರಲ್ಲಿ ಒತ್ತೆಯಿಟ್ಟು, ಸಮಾಜದಲ್ಲಿ ಅಸಮಾನತೆಯನ್ನು ತಾನೇ ಹೆಚ್ಚು ಮಾಡುತ್ತಿದೆ. ಹೀಗಾಗಿ ಇಂದು ಸಮಗ್ರ ಸಮಾನಶಾಲೆ ಹಾಗೂ ಸಮಾನ ಶಿಕ್ಷಣವನ್ನು ಜಾರಿಗೆ ತರಲು, ಶಿಕ್ಷಣ ರಾಷ್ಟ್ರೀಕರಣಕ್ಕೆ ಜನಸಮುದಾಯ ಸರಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. 

ಸ್ವಾತಂತ್ರ್ಯ ದೊರೆತು 75ವರ್ಷಗಳೇ ಕಳೆದು ಹೋಯ್ತು! ಆರ್ಥಿಕ, ಸಾಮಾಜಿಕ ಭೇದವಿಲ್ಲದೆ ಕಿಕ್ಕಿರಿದು ತುಂಬಿರುತ್ತಿದ್ದ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದಿದ ನನ್ನಂತಹವರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಕಳೆದೆರಡು ಮೂರು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ಬಡ ಹೆಣ್ಮಕ್ಕಳು, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ಕಣ್ಣ ಮುಂದಿವೆ. ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಎಂಬ ಪ್ರಶ್ನೆಯ ಜೊತೆ ಜೊತೆಗೇ ಸಮಾನ ಶಿಕ್ಷಣ ವ್ಯವಸ್ಥೆಯುಳ್ಳ ಅಮೆರಿಕ, ಕ್ಯೂಬಾ, ಚೀನಾ, ರಶ್ಯ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? -ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. ಆದರೆ ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.

ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರ್ಯಪೂರ್ವದ 1882ರಲ್ಲಿ ಜ್ಯೋತಿಬಾ ಫುಲೆ ಅವರಿಂದ. ಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರನ್ನೂ ಒಳಗೊಳ್ಳುವಂತಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಸಮಾನ ಶಿಕ್ಷಣ ಪ್ರಯತ್ನದ ದೊಡ್ಡ ಮಾದರಿ. ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸಬೇಕಾಯಿತು. ಆಗ ಈ ಬಿಲ್ ವಿರುದ್ಧವಾಗಿ 11,000 ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯಿತು! 1937ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಸರ್ವರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು, ಅದರ ಪರ ಗಟ್ಟಿಯಾಗಿ ನಿಂತಿದ್ದು ಸಾಹಸದ ಇತಿಹಾಸ. ರಾಜ ಮಹಾರಾಜರು, ಸಾಮಂತರು, ಭೂಮಾಲಕರು ಮಾತ್ರ, ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವವರ್ಯಾರು? ಎಂದು ಪ್ರತಿರೋಧ ಒಡ್ಡಿದರು! ಸ್ವಾತಂತ್ರ್ಯಾ ನಂತರ 1948-49ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯಿತು. ಅಲ್ಲಿಯವರೆಗೆ 14ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದಿದ್ದು 11ವರ್ಷಕ್ಕೆ ಇಳಿಸಬೇಕೆಂದು ಭೂಮಾಲಕರು ವಾದ ಮಾಡಿದರು. ಆದರೆ ಅಂಬೇಡ್ಕರ್ ಅವರು 11ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ ಕನಿಷ್ಠ 14ವರ್ಷದವರೆಗಿನ ಶಿಕ್ಷಣವನ್ನಾದರೂ ಕಡ್ಡಾಯಗೊಳಿಸಲು ಹಠ ಹಿಡಿದು ಎಲ್ಲರನ್ನೂ ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ. ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3,000ದಷ್ಟು ಪ್ರಕರಣಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ! ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ. ವರ್ಗ ಹಾಗೂ ಪಟ್ಟಭದ್ರಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಅದಾಗಲೇ ಇಲ್ಲ. ಆಗೀಗ ಕೆಲ ಪ್ರಯತ್ನಗಳಂತೂ ಆಯ್ತು.

ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುವ 1964-66ರ ಕೊಠಾರಿ ಆಯೋಗ, ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೆ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಕಡ್ಡಾಯ, ಸಮಾನ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು ಯಾವುದೇ ಭೇದವಿಲ್ಲದೆ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಆಯಾ ರಾಜ್ಯದ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳುವಂತಹ ಆಶಯಗಳೇ.

ಈ ಕೊಥಾರಿ ಆಯೋಗದ ಶಿಫಾರಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು 1968, 1986 ಮತ್ತು 1992ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಒಂದಿಷ್ಟೂ ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ಪ್ರಾರಂಭಿಕ ಹಂತದಲ್ಲಿ ದೇಶದ ಒಟ್ಟು ಉತ್ಪನ್ನದ ಶೇ. 8-10ರಷ್ಟನ್ನು ಮೂಲಭೂತ ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಠಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರಕಾರವೂ ಶೇ. 3ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿರುವುದನ್ನು ಸೂಚಿಸುತ್ತದೆ. ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸು ಮೂಲೆಗುಂಪಾಯ್ತು. 1986ರಲ್ಲಿ ಎಚ್ಚೆತ್ತ ಸರಕಾರ, ಈ ಶಿಫಾರಸು ಜಾರಿಯಾಗದೆ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ್ಲ ಎಂದು ಹೇಳಿತು! ಆದರೆ ನಮ್ಮ ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಹೇಳಿಕೆ ಅದೆಷ್ಟು ಸತ್ಯವೆಂಬುದು ಎಲ್ಲರಿಗೂ ತಿಳಿದಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ ಹಾಗೂ ಆಂಗ್ಲಭಾಷೆ ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. ಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೆ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಮಾತ್ರ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತವೆ. ಅಸಮಾನತೆಯ ಯಥಾಸ್ಥಿತಿಯೇ ಮುಂದುವರಿಯುವುದಾದರೆ ನಮ್ಮ ಸಂವಿಧಾನದ ಆಶಯವನ್ನು ನಾವೇ ಮುರಿದಂತಲ್ಲವೇ? ಖಾಸಗಿ ಶಾಲಾ ವ್ಯವಸ್ಥೆ ಈ 20-25 ವರ್ಷಗಳಲ್ಲಿ ಉಳ್ಳವರು- ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ‘ಸರಕಾರಿ ನುಸುಳುಗಳು’ ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿ ಪರಿಣಮಿಸಿದೆ. ಸಂವಿಧಾನದ 350ಎ ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷಾ ಶಿಕ್ಷಣಕ್ಕೆ ಆಯಾ ರಾಜ್ಯ ಸರಕಾರಗಳು ಅನುವು ಮಾಡಿಕೊಟ್ಟು ಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಮತ್ತು ಸದ್ಯ ಮಂಡನೆಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಕೂಡ ಇದನ್ನೇ ಹೇಳುತ್ತದೆ! ಹೀಗೆ ಕಾಗದದ ಮೇಲಷ್ಟೇ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ! ಆದರೆ ವಾಸ್ತವದಲ್ಲಿ ಅದನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಬೇರೆ ಯಾವುದೇ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಆದರೆ ನಮ್ಮ ಸರಕಾರಗಳು, ಜೊತೆಗೆ ನ್ಯಾಯಾಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.

 ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ಪ್ರಜೆಗಳಾದ ನಾವೂ ಪೂರ್ವ ಪ್ರಾಥಮಿಕ ಹಂತದಲ್ಲೇ ಆಂಗ್ಲಭಾಷೆ ಕಲಿಕೆ ಮುಖ್ಯವೆಂದು ನಂಬಲಾರಂಭಿಸಿದ್ದೇವೆ. ನಮ್ಮ ಉಚ್ಚ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನೆಡೆಯೇ ಆಗಿದೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಸಶಕ್ತ ಕಾನೂನಿನ ಕೊರತೆ, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009ರ ‘ಶಿಕ್ಷಣ ಹಕ್ಕು ಕಾಯ್ದೆ’ ‘ಉಚಿತ ಮತ್ತು ಕಡ್ಡಾಯ’ ಶಿಕ್ಷಣಕ್ಕೆ ಒತ್ತು ನೀಡುವ ಕಾಯ್ದೆಯೇ ಹೊರತು ‘ಸಮಾನ’ ಶಿಕ್ಷಣದ ಪರವಾದ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇ. 25ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸಗೀಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ದೇಶದಲ್ಲಿ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಮೂಲಭೂತ ಅವಶ್ಯಕತೆಯ ಪೂರೈಕೆಗೆ ಸರಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ ಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲಾ ಸರಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿದ್ದರಿಂದ, ಸರಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿದ್ದರಿಂದ ಸಹಜವಾಗಿ ಅವರು ಖಾಸಗಿ ಆಂಗ್ಲ ಶಿಕ್ಷಣ ವ್ಯವಸ್ಥೆಯ ಮೊರೆ ಹೋಗುತ್ತಾ ಬಂದಿದ್ದಾರೆ. ಇಂತಹ ಮಕ್ಕಳು 6 ವರ್ಷ ತುಂಬಿದ ನಂತರ ಮತ್ತೆ ಸರಕಾರಿ ಕನ್ನಡ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಇನ್ನಾದರೂ ನಾವು ಅರ್ಥ ಮಾಡಿಕೊಳ್ಳಬೇಕಾದ್ದೆಂದರೆ, ಸರಕಾರಕ್ಕೆ ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮ ಮದ್ದು. ಆದರೆ ಅದೇ ಸರಕಾರ, ‘ರಾಷ್ಟ್ರೀಯ ಶಿಕ್ಷಣ ನೀತಿ- 2020’ನ್ನು ಜಾರಿಗೆ ತಂದು ಸಮಾನ ಶಿಕ್ಷಣದ ಕನಸನ್ನು ನುಚ್ಚುನೂರು ಮಾಡಲು ಹೊರಟುಬಿಟ್ಟಿದೆ! ಈ ರಾಷ್ಟ್ರೀಯ ಶಿಕ್ಷಣ ನೀತಿಯೊಳಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿಯಾದರೂ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ. ‘‘ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೆ, ಲಾಭಕ್ಕಾಗಿಯಲ್ಲದೆ ಸರಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. 6ವರ್ಷಕ್ಕೆ ಮೊದಲಿನಿಂದ ಹಿಡಿದು 14ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ ಸರಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರಕಾರವೇ ನೀಡಬೇಕು. ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ ಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು’’ ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್. ಆದರೆ ಇದು ಸರಕಾರಗಳಿಗೆ ಕೇಳೀತೆ?

ರಾಜಕೀಯ ಇಚ್ಛಾಶಕ್ತಿಯ ಕೊರತೆ, ಜಾಗತೀಕರಣ-ಖಾಸಗೀಕರಣದ ಬಿರುಗಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಮಹಿಳೆ- ತಳಸಮುದಾಯ ಹಾಗೂ ಬಡವರ್ಗ ಇಂದಿಗೂ ಸಮಾನಶಿಕ್ಷಣವನ್ನು ಪಡೆಯಲಾಗದೆ, ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗಿ ಮುಖ್ಯ ವಾಹಿನಿಯಿಂದ ಅಂಚಿಗೆ ಒತ್ತರಿಸಲ್ಪಡುತ್ತಿದ್ದಾರೆ. ಸಮಾನತೆಯನ್ನು ಸಾಧಿಸಲು ಸಮಾನಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಆದರೆ ಸಮಾನಶಿಕ್ಷಣದ ಕುರಿತ ಎಲ್ಲಾ ನೀತಿ, ಆಯೋಗಗಳ ಸಲಹೆಗಳನ್ನೂ ನಿರ್ಲಕ್ಷಿಸಿ ಸರಕಾರ ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಖಾಸಗಿಯ ವರಲ್ಲಿ ಒತ್ತೆಯಿಟ್ಟು, ಸಮಾಜದಲ್ಲಿ ಅಸಮಾನತೆಯನ್ನು ತಾನೇ ಹೆಚ್ಚು ಮಾಡುತ್ತಿದೆ. ಹೀಗಾಗಿ ಇಂದು ಸಮಗ್ರ ಸಮಾನಶಾಲೆ ಹಾಗೂ ಸಮಾನ ಶಿಕ್ಷಣವನ್ನು ಜಾರಿಗೆ ತರಲು, ಶಿಕ್ಷಣ ರಾಷ್ಟ್ರೀಕರಣಕ್ಕೆ ಜನಸಮುದಾಯ ಸರಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರಕಾರ ಈಗಲಾದರೂ ಗಟ್ಟಿ ಮನಸ್ಸು ಮಾಡಿದರೆ ಮಾತ್ರ ಭವಿಷ್ಯದ ಮಕ್ಕಳಾದರೂ ಸಮಾನತೆಯನ್ನು ಉಸಿರಾಡುವಂತಾದೀತು.

Writer - ರೂಪ ಹಾಸನ

contributor

Editor - ರೂಪ ಹಾಸನ

contributor

Similar News