40,000 ಕ್ಕೂ ಹೆಚ್ಚು ತಮಿಳು ಬ್ರಾಹ್ಮಣ ಯುವಕರಿಗೆ ವಧು ಹುಡುಕಲು ಉತ್ತರಪ್ರದೇಶ, ಬಿಹಾರದಲ್ಲಿ ವಿಶೇಷ ಅಭಿಯಾನ
ಚೆನ್ನೈ: 40,000 ಕ್ಕೂ ಹೆಚ್ಚು ತಮಿಳು ಬ್ರಾಹ್ಮಣ ಯುವಕರಿಗೆ ತಮ್ಮ ರಾಜ್ಯದಲ್ಲಿ ವಧುಗಳನ್ನು ಹುಡುಕಲು ಕಷ್ಟವಾಗುತ್ತಿರುವ ಕಾರಣ ತಮಿಳುನಾಡು ಮೂಲದ ಬ್ರಾಹ್ಮಣರ ಸಂಘವು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಸೂಕ್ತ ಜೋಡಿಗಳನ್ನು ಹುಡುಕಲು ವಿಶೇಷ ಅಭಿಯಾನವನ್ನು ಆರಂಭಿಸಿದೆ.
"ನಮ್ಮ ಸಂಗಮ್ ಪರವಾಗಿ ನಾವು ವಿಶೇಷ ಅಭಿಯಾನವನ್ನು ಆರಂಭಿಸಿದ್ದೇವೆ" ಎಂದು ತಮಿಳುನಾಡು ಬ್ರಾಹ್ಮಣ ಸಂಘದ (ತಂಬ್ರಾಸ್) ಅಧ್ಯಕ್ಷ ಎನ್. ನಾರಾಯಣನ್ ಸಂಘದ ಮಾಸಿಕ ತಮಿಳು ಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ಸ್ಥೂಲ ಅಂದಾಜುಗಳನ್ನು ಉಲ್ಲೇಖಿಸಿ, ನಾರಾಯಣನ್ ಅವರು 30-40 ವಯಸ್ಸಿನ 40,000 ಕ್ಕೂ ಹೆಚ್ಚು ತಮಿಳು ಬ್ರಾಹ್ಮಣ ಪುರುಷರು ತಮಿಳುನಾಡಿನಲ್ಲಿ ವಧುಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದರು.
ತಮಿಳುನಾಡಿನಲ್ಲಿ ಮದುವೆ ವಯಸ್ಸಿನ ಗುಂಪಿನಲ್ಲಿ 10 ಬ್ರಾಹ್ಮಣ ಯುವಕರಿದ್ದರೆ, ಆರು ಯುವತಿಯರು ಮಾತ್ರ ಲಭ್ಯವಿರುತ್ತಾರೆ. ಉಪಕ್ರಮವನ್ನು ಮುಂದುವರಿಸಲು ದಿಲ್ಲಿ, ಲಕ್ನೋ ಹಾಗೂ ಪಾಟ್ನಾದಲ್ಲಿ ಸಂಯೋಜಕರನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು.