'ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ': ನವಜೋತ್ ಸಿಧು ವಿರುದ್ಧ ಗೌತಮ್ ಗಂಭೀರ್ ವಾಗ್ದಾಳಿ
ಹೊಸದಿಲ್ಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ ಸಹೋದರ ಎಂದು ಕರೆದಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ವಿರುದ್ಧ ದಿಲ್ಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿಕೊಡಿ ಎಂದಿದ್ದಾರೆ.
ಭಾರತವು 70 ವರ್ಷಗಳಿಂದ ಪಾಕಿಸ್ತಾನದಿಂದ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ ಹಾಗೂ 'ಭಯೋತ್ಪಾದಕ ರಾಷ್ಟ್ರ'ದ ಪ್ರಧಾನಿಯನ್ನು ತನ್ನ ದೊಡ್ಡಣ್ಣ ಎಂದು ಕರೆಯುವುದು ಸಿಧು ಅವರಿಗೆ 'ನಾಚಿಕೆಗೇಡಿನ ಸಂಗತಿ' ಎಂದು ಕ್ರಿಕೆಟಿಗ ಹಾಗೂ ರಾಜಕಾರಣಿ ಹೇಳಿದ್ದಾರೆ.
"ನಿಮ್ಮ ಮಗ ಅಥವಾ ಮಗಳನ್ನು ಗಡಿಗೆ ಕಳುಹಿಸಿ ಮತ್ತು ನಂತರ ಭಯೋತ್ಪಾದಕ ರಾಷ್ಟ್ರದ ಮುಖ್ಯಸ್ಥನನ್ನು ನಮ್ಮ ದೊಡ್ಡ ಸಹೋದರ ಎಂದು ಕರೆಯಿರಿ! # ಅಸಹ್ಯಕರ # ಬೆನ್ನುಮೂಳೆಯಿಲ್ಲದ ಹೇಳಿಕೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಧು, ಇಮ್ರಾನ್ ಖಾನ್ ಅವರನ್ನು ಹೊಗಳಿದರು.
"ಇಮ್ರಾನ್ ಖಾನ್ ನನ್ನ ಹಿರಿಯ ಸಹೋದರ. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅವರು (ಇಮ್ರಾನ್ ಖಾನ್) ನಮಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.
“ಕಳೆದ ಒಂದು ತಿಂಗಳಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಮ್ಮ 40 ಕ್ಕೂ ಹೆಚ್ಚು ನಾಗರಿಕರು ಹಾಗೂ ಯೋಧರನ್ನು ಕೊಂದಿದ್ದಾರೆ ಎಂದು ಸಿಧು ನೆನಪಿಸಿಕೊಳ್ಳುತ್ತಾರೆಯೇ? ಎಂದು ಪೂರ್ವ ದಿಲ್ಲಿಯ ಲೋಕಸಭಾ ಸಂಸದ ಗಂಭೀರ್ ಪ್ರಶ್ನಿಸಿದರು.