ಮಂಗಳೂರು; ಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಹಲವು ಕಾರ್ಮಿಕರು ಪೊಲೀಸ್ ವಶಕ್ಕೆ

Update: 2021-11-21 16:50 GMT

ಮಂಗಳೂರು, ನ.21: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ರಾಜ್‌ಟೈಲ್ಸ್ ಎಂಬ ಹೆಸರಿನ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷ ಪ್ರಾಯದ ಬಾಲಕಿಯನ್ನು ಕೊಲೆಗೈದ ಘಟನೆ ರವಿವಾರ ಸಂಜೆ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಗುರುಪುರ ಸೇತುವೆಯ ಹತ್ತಿರದ ಪರಾರಿ ಕ್ರಾಸ್‌ನಲ್ಲಿ ‘ರಾಜ್ ಟೈಲ್ಸ್’ ಫ್ಯಾಕ್ಟರಿ ಇದ್ದು, ಇಲ್ಲಿ ಕರ್ನಾಟಕದ 10 ಮತ್ತು ಉತ್ತರ ಭಾರತದ ಹಲವು ಯುವಕರು ಹಾಗೂ ನಾಲ್ಕೈದು ಮಹಿಳೆಯರ ಸಹಿತ ಸುಮಾರು 30ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ ಮಹಿಳೆಯ 8 ವರ್ಷದ ಹೆಣ್ಣು ಮಗು ರವಿವಾರ ಸಂಜೆ 4 ಗಂಟೆಯಿಂದ ದಿಢೀರ್ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಸಂಜೆಯ ಸುಮಾರಿಗೆ ಕಾರ್ಖಾನೆಯ ಸಮೀಪದ ಮೋರಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರೇ ಅತ್ಯಾಚಾರಗೈದು ಕೊಲೆ ಮಾಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಹಾಗೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಂದಿ ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ''ರಾಜ್‌ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ ಬಾಲಕಿ ರವಿವಾರ ಸಂಜೆ ನಾಪತ್ತೆಯಾಗಿದ್ದು, ಹುಡುಕಾಟದ ಬಳಿಕ ಸಮೀಪದ ಡ್ರೈನೇಜ್ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕಾರ್ಖಾನೆಯೊಳಗಿನ ಕಾರ್ಮಿಕರೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ. ವಿಚಾರಣೆಗಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ'' ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News