ಬೆದರಿಕೆ, ಹಲ್ಲೆಗೆ ಪ್ರಚೋದನೆ: ಹಿಂಜಾವೇ ಮುಖಂಡ ಜಗದೀಶ್ ಕಾರಂತ ವಿರುದ್ಧ ಜಿಲ್ಲಾಧಿಕಾರಿ ದೂರು, ಪ್ರಕರಣ ದಾಖಲು

Update: 2021-11-24 08:03 GMT
ಕಾರಿಂಜ ರಥಬೀದಿಯಲ್ಲಿ ನ.21ರಂದು ಹಿಂಜಾವೇ ಆಯೋಜಿಸಿದ್ದ 'ರುದ್ರಗಿರಿಯ ರಣಕಹಳೆ' ಎಂಬ ಜನಜಾಗೃತಿ ಸಭೆಯಲ್ಲಿ ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ಮಾತನಾಡಿದರು. (File Photo)

ಮಂಗಳೂರು, ನ.24: ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ, ಸರಕಾರಿ ಅಧಿಕಾರಿಗೆ ಹಲ್ಲೆ ಮಾಡಲು ಪ್ರಚೋದಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ವಿರುದ್ಧ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ದೂರು ದಾಖಲಿಸಿದ್ದಾರೆ.

 ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ಜಿಲ್ಲಾಧಿಕಾರಿ ನೀಡಿರುವ ದೂರಿನನ್ವಯ ಜಗದೀಶ್‌ ಕಾರಂತ್‌ ವಿರುದ್ಧ 153, 117, 504, 506, 189 ಐಪಿಸಿ ಕಲಂ ಅಡಿ ಪ್ರಕರಣ ದಾಖಲಾಗಿದೆ.

ನ.21ರಂದು ಕಾವಳಮುಡೂರು ಗ್ರಾಮದ ಕಾರಿಂಜ ರಥಬೀದಿಯಲ್ಲಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಆಯೋಜಿಸದ್ದ ರುದ್ರಗಿರಿಯ ರಣಕಹಳೆ ಎಂಬ ಜನಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್, ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುವ ಗಣಿಗಾರಿಕೆಯನ್ನು ನಿಲ್ಲಿಸಲು ಡಿಸೆಂಬರ್ 21ರವರೆಗೆ ಗಡುವು ಕೊಟ್ಟಿದ್ದೇವೆ, ಇಲ್ಲದಿದ್ದರೆ ಡಿಸೆಂಬರ್ 21ಕ್ಕೆ ಎಲ್ಲರೂ ಸಿದ್ದರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕಿ, ಅವನ ಕೊರಳು ಪಟ್ಟಿ ಹಿಡಿಯುತ್ತೀವಿ. ತಾಕತ್ತಿದ್ದರೆ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸೋ..ಇಲ್ಲವಾದರೇ ಟ್ರಾನ್ಸ್‌ಫರ್ ತೆಗೆದುಕೊಂಡು ಹೋಗೋ.. ಎಂಬಿತ್ಯಾದಿ ರೀತಿಯಲ್ಲಿ ಏಕವಚನ ಮತ್ತು ಅಸಭ್ಯವಾಗಿ ಮಾತುಗಳನ್ನಾಡುವ ಮೂಲಕ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಿಸಿದ್ದಾರೆ. ಅಲ್ಲದೆ, ಸರಕಾರಿ ಅಧಿಕಾರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಪ್ರಚೋದನೆಯನ್ನು ಹಾಗೂ ಅಪರಾಧಕ್ಕೆ ದುಷ್ಪ್ರೇರಣೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಗದೀಶ್ ಕಾರಂತ್‌ ಅಪರಾಧಿಕ ಕೃತ್ಯವನ್ನು ಎಸಗುವ ಮನೋಧೋರಣೆ ಹೊಂದಿ ಪ್ರಚೋದನಾಕಾರಿಯಾಗಿ ಬೆದರಿಕೆಯೊಡ್ಡಿರುವುದರಿಂದ ಮತ್ತು ಸಾವಿರಾರು ಜನಕ್ಕೆ ಅಪರಾಧ ಕೃತ್ಯವೆಸಗಲು ಪ್ರೇರಣೆ ನೀಡಿ ಅಪರಾಧಿಕಾ ಭೀತಿಯನ್ನುಂಟು ಮಾಡಿದ್ದಾರೆ. ಡಿಸೆಂಬರ್ 21ಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯಿರಿ ಎಂದು ಪ್ರಚೋದಿಸುವ ಮೂಲಕ ಸಾರ್ವಜನಿಕ ನೌಕರನಿಗೆ ಅಪರಾಧಿಕ ಭೀತಿಯನ್ನುಂಟು ಮಾಡಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಹಾನಿ ಮತ್ತು ಹಲ್ಲೆ ಮಾಡಲು  ಪ್ರಚೋದಿಸಿ  ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News