8 ವರ್ಷದ ಹಿಂದೆ ಲಂಚ ಪಡೆದ ಆರೋಪ: ಬೆಳ್ತಂಗಡಿ ತಾಲೂಕು ಸರ್ವೆಯರ್‌ಗೆ ಶಿಕ್ಷೆ

Update: 2021-12-02 14:34 GMT

ಮಂಗಳೂರು, ಡಿ.2: ಸುಮಾರು 8 ವರ್ಷದ ಹಿಂದೆ ಲಂಚ ಪಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅಪರಾಧಿ ಸರ್ವೆಯರ್‌ಗೆ ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ತಾಲೂಕು ಸರ್ವೇಯರ್ ಆಗಿದ್ದ ಟಿ.ಪಿ.ಹೀರೇಗೌಡ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾರೆ. ನ್ಯಾಯಾಲಯವು ಅಪರಾಧಿಗೆ 2 ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.

2013ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಸರ್ವೇಯರ್ ಆಗಿದ್ದ ಟಿ.ಪಿ. ಹೀರೇಗೌಡ ಕರ್ತವ್ಯದಲ್ಲಿದ್ದ ವೇಳೆ ಎ.ಕುಟ್ಟಿಚ್ಚ ಮೊಗೇರ ಎಂಬವರಿಂದ ಭೂ ಪರಿವರ್ತನೆ ಮಾಡಿಕೊಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ವಿಚಾರಣೆ ನಡೆಸಿ ಡಿ.2ರಂದು ಅಂತಿಮ ತೀರ್ಪು ಪ್ರಕಟಿಸಿದ್ದು, 5 ಸಾವಿರ ರೂ. ದಂಡ ಪಾವತಿಸಲು ವಿಲವಾದಲ್ಲಿ ಮತ್ತೆ 6 ತಿಂಗಲ ಸಾದಾ ಸಜೆ ವಿಧಿಸಲಾಗಿದೆ.

ಕರ್ನಾಟಕ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿದ್ದ ದಿಲೀಪ್ ಕುಮಾರ್ ಕೆ.ಹೆಚ್. ತನಿಖಾಧಿಕಾರಿಯಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮನ್ನಿಪಾಡಿ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News