ಬಿಜೆಪಿ ಅಧಿಕಾರದಲ್ಲಿ ಗೋಕಳ್ಳತನ ಹೆಚ್ಚಳ: ಶಾಸಕ ಯು.ಟಿ. ಖಾದರ್ ಆರೋಪ

Update: 2021-12-07 11:59 GMT

ಮಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಗೋಕಳ್ಳತನ ತಡೆಯುವಲ್ಲಿ ವಿಫಲರಾದ ಗೃಹಸಚಿವರು, ಸಾರ್ವಜನಿಕವಾಗಿ ಪೊಲೀಸರನ್ನು ಬೈದು ಏನು ಪ್ರಯೋಜನ? ಪೊಲೀಸರ ನೈತಿಕತೆ ಕುಸಿಯುವಂತೆ ಮಾತನಾಡಿದರೆ, ಬಿಟ್ಟಿ ಪ್ರಚಾರ ಸಿಗುವುದು ಬಿಟ್ಟರೆ ಬೇರೇನೂ ಸಾಧ್ಯವಿಲ್ಲ ಎಂದರು.

ಈಗಲೂ ಗೋಕಳ್ಳತನ, ಗೋಹತ್ಯೆ ನಡೆಯುತ್ತದೆ ಎಂದಾದರೆ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಪ್ರಯೋಜನವಾದರೂ ಏನು? ಕೇವಲ ಚುನಾವಣೆ ಗಿಮಿಕ್‌ ಗಾಗಿ ಕಾಯಿದೆ ತಂದಿದೆಯೇ ಎಂದು ಖಾದರ್ ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಶಾಸಕರ ಕುಮ್ಮಕ್ಕಿನಿಂದ ಗೋಕಳ್ಳತನ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ಈಗ ಯಾವ ಶಾಸಕರು ಬೆಂಬಲ ನೀಡುತ್ತಿದ್ದಾರೆ. ಗೋಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಗೋಮಾಂಸ ರಫ್ತು ಕಂಪನಿಗಳನ್ನು ಬಂದ್ ಮಾಡಿ. ಪಕ್ಕದ ಕೇರಳ, ಗೋವಾದಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ ಎಂದು ಅವರು ಹೇಳಿದರು.

ಅಧಿಕಾರ ಕೇಂದ್ರೀಕಣಕ್ಕೆ ಮುಂದಾಗಿರುವ ಬಿಜೆಪಿಗೆ ತಕ್ಕ ಉತ್ತರ ನೀಡಿ

ಅಧಿಕಾರ ವಿಕೇ‌ಂದ್ರೀಕರಣದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು. ಆದರೆ ಅಧಿಕಾರ ಕೇಂದ್ರೀಕರಣದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಯ ತಳಹದಿ ಶಿಥಿಲಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಗ್ರಾ.ಪಂ ಸದಸ್ಯರು ಸ್ವಾಭಿಮಾನದ ಮತ ಚಲಾಯಿಸಬೇಕು ಎಂದು ಶಾಸಕ ಯು. ಟಿ.ಖಾದರ್ ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಿಎಚ್ಡಿ ಮಾಡಿರುವ ಮಂಜುನಾಥ ಭಂಡಾರಿಯವರಿಗೆ ಗೌರವದ ಗೆಲುವು ತಂದು ಕೊಡಬೇಕೆಂದು ಅವರು ಗ್ರಾಪಂ ಸದಸ್ಯರಿಗೆ ಕರೆ ನೀಡಿದರು.

ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಯು.ಟಿ. ಖಾದರ್, ಹೊಸತಾಗಿ ಚುನಾವಣೆಗೆ ಸ್ಪರ್ಧಿಸುವಾಗ ಮತದಾರರಿಗೆ ಪರಿಚಯ ಇರಬೇಕೆಂದಿಲ್ಲ. ಗೆದ್ದ ಬಳಿಕ ಅವರು ತಮ್ಮ ಕೆಲಸ ಕಾರ್ಯದ ಮೂಲಕ ಎಲ್ಲರಿಗೂ ಪರಿಚಯ ಆಗಲಿದ್ದಾರೆ ಎಂದರು.

ನಳಿನ್ ಕಾಂಗ್ರೆಸ್ ಗೆ ಸೇರಲಿ

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸುವ ಸಂಸದ ನಳಿನ್ ಕುಮಾರ್ ಹೇಳಿಕೆ ಕುರಿತು ಸುದ್ದಿಗಾಗರ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಯು.ಟಿ. ಖಾದರ್, ಬಿಜೆಪಿ ಬಿಟ್ಟು ನಳಿನ್ ಕಾಂಗ್ರೆಸ್ ಸೇರುವುದು ಒಳ್ಳೆಯದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರೂ ಅಗಿರುವ ನಳಿನ್ ಇತ್ತೀಚೆಗೆ ಖಾದರ್ ಹಾಗೂ ರಮಾನಾಥ ರೈ ಅವರನ್ನು ಹೊರತುಪಡಿಸಿ ಎಲ್ಲರೂ ಬಿಜೆಪಿಗೆ ಬರಲಿ ಎಂಬ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಈ ಹಿಂದೆ ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದವರು ನಳಿನ್ ಕುಮಾರ್ ಕಟೀಲ್. ಎನ್ಎಸ್ ಯುಐ ನಲ್ಲಿದ್ದಾಗ ವಿನಯ್ ಕುಮಾರ್ ಸೊರಕೆ ಪರ ದುಡಿದವರು ನಳಿನ್ ಕುಮಾರ್ ಕಟೀಲ್ ಎಂದು ಹೇಳಿದರು.

ಹಿಂದಿನದು ನಳಿನ್ ಗೆ ಈಗ ನೆನಪಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಬದ್ಧತೆ ಹಾಗು ಶಕ್ತಿ ನಳಿನ್ ರಿಗೆ ಗೊತ್ತಿದೆ. ಕಾಂಗ್ರೆಸ್ ಅನ್ನು ಬಿಟ್ಟು ಬಿಜೆಪಿಗೆ ಸೇರಿದವರ ಚರಿತ್ರೆಯನ್ನು ಒಮ್ಮೆ ನೋಡಿಕೊಳ್ಳಲಿ. ಬಿಜೆಪಿಯಲ್ಲಿ ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ. ನಳಿನ್ ಕೂಡ ಕಾಂಗ್ರೆಸ್ ಗೆ ಬರಲಿ. ಅವರು ಹಿಂದೆ ಕಾಂಗ್ರೆಸ್ ಗಾಗಿ ಕೆಲಸ ಮಾಡಿದ್ದಾರೆ ಎಂದು ಖಾದರ್   ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಉಮ್ಮರ್  ಫಾರೂಕ್, ಲಾರೆನ್ಸ್ ಡಿಸೋಜ, ಟಿ.ಕೆ ಸುಧೀರ್, ಸಂತೋಷ್ ಕುಮಾರ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News