ಮುಲ್ಕಿ: ಟೋಲ್ ಸಿಬ್ಬಂದಿಯ ಕೊಲೆಯತ್ನ ವಿಫಲಗೊಳಿಸಿದ ಸ್ಥಳೀಯ ಯುವಕರ ತಂಡ

Update: 2021-12-07 13:46 GMT

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಸ್ ರಾವ್ ನಗರದ ಕೊಲ್ನಾಡು ಬಳಿ ಯುವಕನೋರ್ವನ ಕೊಲೆ ಯತ್ನವನ್ನು ಸ್ಥಳೀಯ ಯುವಕರು ವಿಫಲಗೊಳಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಮಂದಿ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರನ್ನು ಸುರತ್ಕಲ್ ಟೋಲ್ ಗೇಟ್ ಸಿಬ್ಬಂದಿಗಳಾದ ಯೋಗೀಶ್, ಪ್ರಜ್ವಲ್, ಈರಣ್ಣ ಎಂದು ಪೊಲೀಸರು ತಿಳಿಸಿದ್ದಾರೆ. 

ಸುರತ್ಕಲ್ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ್, ಪ್ರಜ್ವಲ್, ಈರಣ್ಣ ಅವರು ಕ್ಷುಲ್ಲಕ ಕಾರಣಕ್ಕೆ ಅದೇ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಸುಚಿನ್ ಎಂಬಾತನನ್ನು ತಲವಾರಿನಿಂದ ಕೊಲೆಗೆ ಯತ್ನಿಸಿದ್ದು, ಈ ಸಂದರ್ಭ ಕೊಲ್ನಾಡು ಮೆಸ್ಕಾಂ ಬಳಿಯ ಮುಸ್ಲಿಂ ಯುವಕರು ಕೊಲೆಯತ್ನ ತಡೆದು ನಂತರ ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಕೂಡಲೇ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ತಲವಾರು ಹಿಡಿದುಕೊಂಡು ಬಂದಿದ್ದ ಮೂವರು ಯುವಕರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಕೊಲೆಯತ್ನ ತಡೆದ ಸ್ಥಳೀಯ ಯುವಕರ ಸಮಯ ಪ್ರಜ್ಞೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿರುವುದು ವೈರಲ್ ಆಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News