ಸುರತ್ಕಲ್ ವ್ಯಾಪ್ತಿಯ 4 ಮನೆ ಕಳವು ಪ್ರಕರಣ; ಅಂತಾರಾಜ್ಯ ಕಳವು ಆರೋಪಿ ಸೇರಿ ಇಬ್ಬರ ಬಂಧನ

Update: 2021-12-09 12:26 GMT

ಮಂಗಳೂರು, ಡಿ.9: ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ ನಡೆದ ನಾಲ್ಕು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಅಂತಾರಾಜ್ಯ ಕಳವು ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 16.50 ಲಕ್ಷ ರೂ. ಮೌಲ್ಯದ ಚಿನ್ನಾಭರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ರಾಜನ್ ಚಿನ್ನತಂಬಿ (57) ಎಂಬಾತ ತಮಿಳುನಾಡಿನ ಕೊಯಮತ್ತಿನ ತೆಲ್ಲುಗುಮ್ ಪಾಳಯಂ ನಿವಾಸಿ. ಈತ ಅಂತಾರಾಜ್ಯ ಕಳವು ಆರೋಪಿಯಾಗಿದ್ದು, ಈತನ ಮೇಲೆ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದಲ್ಲಿಯೂ ಹಲವಾರು ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವೆಂಬರ್ 22ರಂದು ಎಚ್‌ಪಿಸಿಎಲ್ ಪ್ಲಾಂಟ್ ಬಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜನ್ ಚಿನ್ನತಂಬಿಯನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾ ಈತ ಕುಳಾಯಿ, ಕಾನ, ಹೊಸಬೆಟ್ಟು, ಕಡಂಬೋಡಿಯಲ್ಲಿ ನಡೆದ ಕಳವು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದ. ಆತ ನೀಡಿದ ಮಾಹಿತಿಯಂತೆ ಬೆಂಗಳೂರಿನ ಚಂದಾಪುರದ ಕೀರ್ತಿ ಲೇ ಔಟ್‌ನ ಪಿ.ಬಿ. ಪ್ರಮೋದ್ ಎಂಬಾತನಿಗೆ ಸೇರಿದ ಲಕ್ಷ್ಮೀ ಕೇರಳ ಮೆಸ್‌ನ ರೂಂನಲ್ಲಿ ಆರೋಪಿ ರಾಜನ್ ಬಚ್ಚಿಟ್ಟಿದ್ದ ಚಿನ್ನದ ಒಡವೆ ಸ್ವಾಧೀನ ಪಡಿಸಿಕೊಂಡು ಆರೋಪಿ ಪಿ.ಬಿ. ಪ್ರಮೋದ್ ಎಂಬಾತನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ರಾಜನ್ ಕಳವು ಮಾಡಿ ಕೊಟ್ಟಿದ್ದ ಚಿನ್ನದ ಒಡವೆಗಳ ಪೈಕಿ ಮಣಪುರಂ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ ಒಡವೆಗಳು ಹಾಗೂ ಆರೋಪಿ ರಾಜನ್ ತನ್ನ ಕೊಯಮತ್ತೂರಿನ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನ ಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಕೆ., ಉಪ ನಿರೀಕ್ಷಕ ಚಂದ್ರಶೇಖರಯ್ಯ, ಎಎಸ್‌ಐ ವಿನೋದ್, ಸಿಬ್ಬಂದಿಯಾದ ಸಂತೋಷ್, ಅಣ್ಣಪ್ಪ, ಅಜಿತ್ ಮ್ಯಾಥ್ಯು, ರಾಜೇಶ್ ಅತ್ತಾವರ, ಲಮಾಣಿ, ಮಣಿಕಂಠ, ಬಸವರಾಜ್ ಯರಬಾಳು, ಮೋಹನ್ ಎಂಬವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News