ಕಾಸರಗೋಡು ಜಿಲ್ಲಾದ್ಯಂತ ಸಂಭ್ರಮದ ಕ್ರಿಸ್ ಮಸ್ ಆಚರಣೆ
Update: 2021-12-25 04:23 GMT
ಕಾಸರಗೋಡು, ಡಿ.25: ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಚರ್ಚ್ ಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಸಂಭ್ರಮದ ಬಲಿಪೂಜೆ ನೆರವೇರಿತು.
ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ ಬಲಿಪೂಜೆಯನ್ನು ಕಲ್ಯಾಣಪುರದ ಧರ್ಮಗುರು ಫಾದರ್ ಆಸ್ಟಿನ್ ಫೆರ್ನಾಂಡಿಸ್ ನೆರವೇರಿಸಿದರು.
ರಾಂಚಿ ಸೆಮಿನರಿಯ ಫಾದರ್ ಜೋನ್ ಕ್ರಾಸ್ತಾ, ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾ.ಹ್ಯಾರಿ ಡಿಸೋಜ ಉಪಸ್ಥಿತರಿದ್ದರು.
ಬಲಿಪೂಜೆಗೂ ಮೊದಲು ಕ್ಯಾರಲ್ಸ್ ಹಾಡಲಾಯಿತು. ಗೋದಲಿ ವಿಶೇಷ ಆಕರ್ಷಣೆಯಾಗಿತ್ತು . ಕ್ರಿಸ್ ಮಸ್ ಪೂರ್ವಭಾವಿಯಾಗಿ ಮನೆ ಮನೆಗಳಿಗೆ ಕ್ರಿಸ್ತನ ಸಂದೇಶ ಸಾರುವ ಕ್ರಿಸ್ಮಸ್ ಕ್ಯಾರಲ್ಸ್ ಕಾರ್ಯಕ್ರಮ ದಿನಗಳ ಹಿಂದೆ ಆಯೋಜಿಸಲಾಗಿತ್ತು. ಕೋವಿಡ್ ಹಾಗೂ ಒಮೈಕ್ರಾನ್ ಭೀತಿ ಕಾರಣ ಸರಕಾರ ಹೊರಡಿಸಿದ್ದ ಮಾರ್ಗಸೂಚಿಯಂತೆ ಬಲಿಪೂಜೆ ಹಾಗೂ ಇತರ ಪ್ರಾರ್ಥನಾ ವಿಧಿವಿಧಾನಗಳು ನೆರವೇರಿಸಲಾಗುತ್ತಿದೆ.