ಮಾನವೀಯತೆಯ ಮೇರು ವ್ಯಕ್ತಿತ್ವ ಅಕ್ಕಯ್ ಆತ್ಮಕಥನ

Update: 2021-12-25 05:50 GMT

ಕರ್ನಾಟಕ ಕಂಡ ಒಂದು ಮಹತ್ವದ ಜೀವನೋತ್ಸಾಹದಿಂದ ಚಿಮ್ಮುವ ಜೀವ ಅಕ್ಕಯ್ ಪದ್ಮಶಾಲಿಯವರು. ಇವರ ಆತ್ಮಕಥನ ಓದಿದ ನಂತರ ಮೂರು ದಿನಗಳ ಕಾಲ ಖಿನ್ನತೆಗೆ ಒಳಗಾದೆ. ಹಗಲು ರಾತ್ರಿ ಹಿಜ್ರಾಗಳ ಬದುಕು ಎಂತಹ ಅಮಾನವೀಯವಾದುದು. ಸಮಾಜ ಅವರು ಮಾಡದ ತಪ್ಪಿಗೆ ಎಂತಹ ಕಠೋರ ಶಿಕ್ಷೆ ನೀಡುತ್ತಿದೆ ಎಂದು ನೆನಪಿಸಿಕೊಂಡರೂ ಸಾಕು ಮೈ ಜುಂ ಎನ್ನುತ್ತದೆ. ಇಂತಹ ಅನಾಗರಿಕ ನಡೆಗಾಗಿ ನಾವೆಲ್ಲ ಅಕ್ಕಯ್ ಬಳಗದ ಅಪರಾಧಿಗಳಾಗಿದ್ದೇವೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ತುಂಬಿದ ಸಭೆಯಲ್ಲಿ ಅಕ್ಕಯ್ ಅವರು ‘‘ಕ್ಯಾನ್ ಐ ಹಗ್ ಯು’’ ಎಂದು ಕೇಳಿ ಇಡೀ ಸಭಾಂಗಣಕ್ಕೇ ದಂಗು ಬಡಿಸಿದ್ದರು. ಕನ್ನಡದಲ್ಲಿ ಅನೇಕ ಮಹಿಳೆಯರ ಆತ್ಮಕಥನಗಳು ಬಂದಿವೆ. ಆದರೆ ಲೈಂಗಿಕ ಅಲ್ಪಸಂಖ್ಯಾತರ ಆತ್ಮಕಥನಗಳು ಬಂದಿರುವುದು ಬೆರಳೆಣಿಕೆಯಷ್ಟು ಮಾತ್ರ. ಅಕ್ಕಯ್ ಪದ್ಮಶಾಲಿಯವರ ‘ಅಕ್ಕಯ್’ ಕೃತಿಯು ಒಂದು ವಿಶಿಷ್ಟವಾದ ಆತ್ಮಕಥನವಾಗಿದೆ. ಅದಕ್ಕೆ ಉತ್ತಮ ನಿರೂಪಣೆ ಒದಗಿಸಿದವರು ಡಾ. ಡೊಮಿನಿಕ್.ಡಿ.ಯವರು. ಅಕ್ಕಯ್ ಅವರ ಬದುಕಿನ ಪ್ರಸಂಗಗಳನ್ನು ಮನಕ್ಕೆ ನಾಟುವಂತೆ ಇವರು ನಿರೂಪಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು ಹನ್ನೊಂದು ಅಧ್ಯಾಯವನ್ನೊಳಗೊಂಡಿದೆ. ಅವರ ಬಾಲ್ಯದಿಂದ ಹಿಡಿದು ಇವತ್ತಿನವರೆಗೂ ಅವರ ಬದುಕನ್ನು ಈ ಕೃತಿ ತೆರೆದಿಡುತ್ತದೆ. ಈ ಆತ್ಮಕಥನ ಕ್ಷಣಕ್ಷಣಕ್ಕೂ ನಮ್ಮ ಕುತೂಹಲವನ್ನು ಕೆರಳಿಸುತ್ತದೆ. ಕೂತೂಹಲಕಾರಿಯಾದ ಅವರ ಬದುಕು, ಭಯಾನಕ ಘಟನೆಗಳು, ಸಾಮೂಹಿಕ ಅತ್ಯಾಚಾರಗಳು...

ಇಂತಹ ಅಕ್ಕಯ್ಯಮ್ಮನಿಗೆ ತಾಯಿ ತಂದೆ ಇಟ್ಟ ಹೆಸರು ಜಗದೀಶ. ಶಾಲೆಯಲ್ಲಿಯೇ ಆತನ ಲಿಂಗ ಯಾವುದೆನ್ನುವುದನ್ನು ತಿಳಿಯಲು ಬಟ್ಟೆ ಹರಿದು ಅತ್ಯಾಚಾರ ಮಾಡಿದಂತಹ ಶಾಲೆಯ ಪರಿಸರ. ಅವರು ತಮ್ಮ 12ನೇ ವಯಸ್ಸಿನಲ್ಲಿಯೇ ಗಂಡು ದೇಹದೊಳಗಿನ ಹೆಣ್ಣನ್ನು ಕಾಣುತ್ತಿರುತ್ತಾರೆ. ಆದರೆ ನಮ್ಮ ನಾಗರಿಕ ಸಮಾಜ, ಕುಟುಂಬ ಅದನ್ನು ಒಪ್ಪಿಕೊಳ್ಳುವುದಿಲ್ಲ. ಎರಡು ಬಾರಿ ಸಾವನ್ನು ಆಹ್ವಾನಿಸಿ, ನೇಣಿಗೆ ಕೊರಳೊಡ್ಡಿ ಬದುಕುಳಿಯುತ್ತಾರೆ. ಪುಟ್ಟ ಬಾಲಕನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಹೆತ್ತವರು ಮನೆಯಿಂದ ಹೊರಹಾಕುತ್ತಾರೆ. ಆಗ ಫ್ಲೈಓವರ್ ಕೆಳಗೆ ಮಲಗಿ ಎಂಟು ದಿನಗಳ ಭಯಾನಕ ದಿನಗಳನ್ನು ನೂಕಿದ ಬಾಲಕ ಎಂತೆಂತಹ ದೈಹಿಕ ದೌರ್ಜನ್ಯಕ್ಕೊಳಗಾಗಿ, ಹೊಟ್ಟೆಯ ಹಸಿವು ತಾಳಲಾರದೆ, ಬೇಸತ್ತು ಉಪಾಯವಿಲ್ಲದೆ ಮನೆಗೆ ಮರಳುತ್ತಾನೆ. ಆ ಜಗದೀಶನೇ ಮುಂದೆ ಅಕ್ಕಯ್ ಪದ್ಮಶಾಲಿ ಎಂಬ ಹೆಣ್ಣು ಹೆಸರಿನಿಂದ ಖ್ಯಾತರಾಗುತ್ತಾರೆ.

ಇವರ ತಂದೆಯವರು ವಾಯುಪಡೆಯಲ್ಲಿದ್ದರು. ತಾಯಿ ಗೃಹಿಣಿ, ಹತ್ತನೇ ತರಗತಿಗೆ ತನ್ನ ಶಿಕ್ಷಣವನ್ನು ತನ್ನ ಜೈವಿಕ ಕಾರಣಗಳಿಂದಾಗಿ ನಿಲ್ಲಿಸಬೇಕಾಗುತ್ತದೆ. ಇವರು ಹಲವಾರು ಮೊದಲುಗಳಿಗೆ ಪೀಠಿಕೆ ಹಾಕಿದ್ದಾರೆ. ಇಂತಹ ಅಕ್ಕಯ್‌ಗೆ 2015ರಲ್ಲಿ ಅಮೆರಿಕದ ಶ್ವೇತಭವನಕ್ಕೆ ಆಗ ಅಲ್ಲಿನ ಅಧ್ಯಕ್ಷರಾದ ಬರಾಕ್ ಒಬಾಮರಿಂದ ಅಹ್ವಾನಿಸಲಾಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾಗ ಅಕ್ಕಯ್‌ರ ಜೊತೆ ದೀರ್ಘ ಮಾಡುಕತೆಗಳನ್ನು ನಡೆಸಿದ್ದರು. ತನ್ನ ಲಿಂಗವನ್ನು ಮಹಿಳೆ ಎಂದು ನಮೂದಿಸಿ ಡ್ರೈವಿಂಗ್ ಲೈಸನ್ಸ್ ಪಡೆದ ದೇಶದ ಮೊದಲಿಗರು. ಪಾಸ್‌ಪೋರ್ಟನ್ನು ಸಹ ಹೊಂದಿದ್ದಾರೆ. ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಅಲ್ತಮಶ್ ಕಬೀರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿಗಳು ಅಕ್ಕಯ್‌ರನ್ನು ಅಹ್ವಾನಿಸಿದ್ದರು. ಇಂತಹ ಅಕ್ಕಯ್‌ಯವರು ವಾಸು ಎನ್ನುವವರೊಂದಿಗೆ ವಿವಾಹವಾಗಿ ಮದುವೆ ನೋಂದಾಯಿಸಿದ ಮೊದಲ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯಾಗಿದ್ದಾರೆ. ಇವರು ಒಂದು ಮಗುವನ್ನು ಕಾನೂನು ರೀತಿಯಲ್ಲಿ ದತ್ತು ಪಡೆದು ಸಾಕುತ್ತಿದ್ದಾರೆ. ಘನತೆಯ ಬದುಕಿಗಾಗಿ ಅವರು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ದಾರಿಯಲ್ಲಿ ಭಿಕ್ಷೆ ಬೇಡುತ್ತ, ಗಿಡ, ಮರ, ಪೊದೆಯ ಬಳಿ ಲೈಂಗಿಕ ವೃತ್ತಿ ನಡೆಸುತ್ತ ಬಂದ ಅವರು ಅದಕ್ಕೆಲ್ಲ ಪೂರ್ಣ ವಿರಾಮ ಹಾಕಿ ತನ್ನ ಹಾಗೂ ತನ್ನಂತಹವರಿಗಾಗಿ ಉತ್ತಮ ಬದುಕು ಹುಡುಕಿಕೊಂಡು, ಹೋರಾಟದ ಹಾದಿ ಹಿಡಿದವರು. ಇಂತಹ ಸಮುದಾಯವನ್ನು ಮನುಷ್ಯರಂತೆ ವ್ಯವಹರಿಸಲು, ಇವರ ಯೋಗಕ್ಷೇಮಕ್ಕಾಗಿ ಸರಕಾರ ಚಿಂತಿಸಬೇಕಾಗಿದೆ. ಸರಕಾರವಷ್ಟೇ ಅಲ್ಲ ನ್ಯಾಯಾಲಯ, ಪೊಲೀಸ್, ಜನ ಸಮುದಾಯವು ತಮ್ಮ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡಿದವರು ಅಕ್ಕಯ್ ಪದ್ಮಶಾಲಿಯವರು.

ಅಕ್ಕಯ್ ಆತ್ಮಕಥನದಲ್ಲಿ ಅವರ ಬದುಕು, ಬವಣೆ, ಸವಾಲು, ಬಾಲ್ಯದಿಂದ ಹರೆಯಕ್ಕೆ ಕಾಲಿಟ್ಟಾಗ ನಡೆವ ಜೈವಿಕ ಬದಲಾವಣೆಗಳು, ರೂಪುಗೊಂಡ ಬಗೆ, ಎದುರಿಸಿದ ಸಂಕಷ್ಟಗಳು, ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ದೌರ್ಜನ್ಯ, ಅನಾದರ, ಅವಮಾನ, ಘನತೆಯಿಲ್ಲದ ಬದುಕು, ಸಮುದಾಯದ ಹುಡುಕಾಟ, ಸಮುದಾಯ, ಸಂಸ್ಕೃತಿ, ರಾಷ್ಟ್ರೀಯ ವಕಾಲತ್ತು, ದೈಹಿಕ ರೂಪಾಂತರ, ಪ್ರೀತಿ ಮದುವೆ, ಗಂಡಾಳ್ವಿಕೆ, ವಿಶ್ವ ಪರ್ಯಟನೆ, ಸ್ತ್ರೀವಾದ ಹೀಗೆ ಬೇರೆ ಬೇರೆ ಘಟ್ಟಗಳಿಂದ ಅಕ್ಕಯ್ ಅವರು ಹಾದು ಬಂದಿದ್ದಾರೆ. ಅವರು ಆಸ್ಪತ್ರೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿಯೇ ಒಂದು ಕೊಠಡಿ ಮೀಸಲಿರಿಸಲು ಹೋರಾಡಿದ್ದಾರೆ. ಈಗ ಆಸ್ಪತ್ರೆಗಳಲ್ಲಿ ಅವರಿಗಾಗಿಯೇ ಒಂದು ಕೊಠಡಿಯಿರುತ್ತದೆ. ಹೆಣ್ಣಾಗಿ ಲಿಂಗ ಪರಿವರ್ತನೆಯಾದ ಬಳಿಕ ಅಕ್ಕಯ್ ಮೊದಲ ಮಹಿಳೆಯಾಗಿ ತಮಗೆಂದೇ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಬಳಸುತ್ತಾರೆ. ಲಿಂಗಪರಿವರ್ತನೆಯ ಅವೈಜ್ಞಾನಿಕ ಪದ್ಧತಿಗಳನ್ನು ನಿರಾಕರಿಸಿ ವೈಜ್ಞಾನಿಕ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅಕ್ಕಯ್ ಅವರನ್ನು ಭೇಟಿಯಾಗಲು ಅಮ್ಮ ಬಂದಾಗ ‘‘ಯಾಕೆ ಇದನ್ನೆಲ್ಲ ಮಾಡಿಕೊಂಡೆ. ಮಹಿಳೆಯಾಗಿ ನಾನು ತುಂಬಾ ಅನುಭವಿಸಿದ್ದೇನೆ. ಇದೆಲ್ಲ ನಿನಗಾಗುವುದು ಬೇಡವೆಂದು ಭಾವಿಸಿದ್ದೆ’’ ಎನ್ನುತ್ತಾರೆ.

 ಕೊನೆಗೆ ಮಾಗಡಿಯಲ್ಲಿ ಒಂದು ಮನೆ ಖರೀದಿಸುವ ಅಕ್ಕಯ್ ಸಾಲಕ್ಕಾಗಿ ಬ್ಯಾಂಕಿಗೆ ವಿಚಾರಿಸಿದಾಗ ಅವರು ಲೈಂಗಿಕ ಅಲ್ಪಸಂಖ್ಯಾತರಿಗೆ ನಿಶ್ಚಿತ ಯಾವುದೇ ಆದಾಯವಿರದ ಕಾರಣ ಕೊಡಲು ಬರುವುದಿಲ್ಲವೆನ್ನುತ್ತಾರೆ. ಆಗ ಅಕ್ಕಯ್‌ಯವರು ತಾನು ಐಟಿ ರಿಟರ್ನ್ಸ್ ಸರಕಾರಕ್ಕೆ ಕಟ್ಟುತ್ತೇನೆ. ತನಗೆ ಸರಕಾರ ಬೆಂಬಲಿಸಬೇಕು ಎನ್ನುತ್ತಾರೆ. ಕೊನೆಗೆ ಸಾಲ ಪಡೆದು ಮನೆ ಕಟ್ಟಿಕೊಳ್ಳುತ್ತಾರೆ. ಆದರೂ ಪತಿಯೊಂದಿನ ಲೈಂಗಿಕ ಬದುಕು ಹಿಂಸಾ ಶಿಬಿರವಾಗಿರುತ್ತಿತ್ತು. ಮೈಯೆಲ್ಲಾ ಗಾಯಗೊಳಿಸುತ್ತಿದ್ದ, ಖಾಸಗಿ ಅಂಗಗಳಿಗೆ ಗಾಯ ಮಾಡುತ್ತಿದ್ದ. ಇದರಿಂದ ಅಕ್ಕಯ್ ಬಹಳ ನೊಂದುಕೊಳ್ಳುತ್ತಾರೆ. ಗ್ಯಾಸ್ ಸಿಡಿಸಿ ಅಕ್ಕಯ್‌ರನ್ನು ಪತಿಯೇ ಸಾಯಿಸಲು ಪ್ರಯತ್ನಿಸಿದಾಗ, ಹೇಗೋ ಅದರಿಂದ ಮಗುವಿನೊಂದಿಗೆ ಪಾರಾಗಿ ಬರುತ್ತಾರೆ. ಅವನು ಮಗುವನ್ನೂ ಸಾಯಿಸಲು ಪ್ರಯತ್ನ ಪಟ್ಟಿದ್ದ. ಕೊನೆಗೆ ಗಂಡನೊಂದಿಗೆ ವಿಚ್ಛೇದನವೂ ಆಗುತ್ತದೆ. ಅವರ ಪುಟ್ಟ ಬದುಕಿನಲ್ಲಿ ಹಲವಾರು ನೋವು, ಸಂಕಟಗಳನ್ನು ಅನುಭವಿಸಿದರು.

  

ಅವರು ಸಾಕಷ್ಟು ದೇಶಗಳನ್ನು ಸುತ್ತಿದ್ದಾರೆ. ಅಮೆರಿಕ, ಶ್ರೀಲಂಕಾ, ನೇಪಾಳ, ಮಸ್ಕತ್, ಥೈಲ್ಯಾಂಡ್, ಜಪಾನ್, ಓಮನ್ ಮುಂತಾದ ಹಲವಾರು ದೇಶಗಳನ್ನು ಸುತ್ತಿದ ನಂತರ ಮನುಷ್ಯನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮೌಢ್ಯಕ್ಕಿಂತ ಸಂವಾದಗಳು ಉತ್ತಮ ಫಲ ಕೊಡುತ್ತವೆ. ಭಜನೆಗಿಂತ ಮಾನವೀಯತೆ ಹೆಚ್ಚು ಮುಖ್ಯವಾಗುತ್ತದೆ ಎಂಬುದನ್ನು ಮನಗಾಣುತ್ತಾರೆ. ಸ್ತ್ರೀವಾದವು ಕೇವಲ ಗಂಡು ಹೆಣ್ಣುಗಳಷ್ಟೇ ಅಲ್ಲ. ಅದು ಲೈಂಗಿಕ ಅಲ್ಪಸಂಖ್ಯಾತರನ್ನೂ ಒಳಗೊಳ್ಳಬೇಕೆಂಬುದು ಅವರ ಅಂಬೋಣ. ನಮ್ಮ ಸಮಾಜ ಅಕ್ಕಯ್‌ನಂತಹ ಅನೇಕರಿಗೆ ನೋವನ್ನಿತ್ತಿದೆ, ಅವರು ಮಾಡದ ತಪ್ಪಿಗೆ ಅವರಿಗೆ ನೋವನಿತ್ತ ನಾವೆಲ್ಲರೂ ಅವರ ಕ್ಷಮೆಯ ಆಕಾಂಕ್ಷಿಗಳು. ನಮಗೆ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಮುಂದಿನ ಅದೆಷ್ಟು ಪೀಳಿಗೆಗಳು ಈ ಸಾಲದ ಪಾಲುಗಾರರಾಗಬೇಕೋ ತಿಳಿಯದು. ಅಕ್ಕಯ್ ಉತ್ತಮ ಭಾಷಣಕಾರ್ತಿ ಮತ್ತು ಗಾಯಕಿಯೂ ಹೌದು. ಎಲ್ಲಕ್ಕೂ ಮಿಗಿಲಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ. ಅವರ ಕ್ರಿಯಾಶೀಲತೆಗಾಗಿ ಕರ್ನಾಟಕ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಶಾಂತಿ ಹಾಗೂ ಶಿಕ್ಷಣಕ್ಕಾಗಿ ಭಾರತೀಯ ವರ್ಚುವಲ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ನ್ನು ಅವರು ಪಡೆದಿದ್ದಾರೆ. ಅಕ್ಕಯ್‌ಯವರು ಲೈಂಗಿಕ ಅಲ್ಪಸಂಖ್ಯಾತರ ಮದುವೆಯನ್ನು ರಿಜಿಸ್ಟರ್ ಮಾಡಿಸಿದ ಮೊದಲಿಗರು. ಟ್ರಾನ್ಸ್ಜೆಂಡರ್ ಹಕ್ಕುಗಳಿಗಾಗಿ ಬದುಕನ್ನು ಮುಡುಪಾಗಿಟ್ಟವರು.

2004ರಿಂದ ‘ಸಂಗಮ’ ಎಂಬ ಸಂಸ್ಥೆಯನ್ನು ನಡೆಸುತ್ತಾ ಬಂದು ಅದರ ಉನ್ನತಿಗೆ ಕಾರಣರಾಗಿದ್ದಾರೆ. ನಂತರ 2013ರಲ್ಲಿ ಸಂಗಮವನ್ನೂ ತೊರೆದು ಹೊರಬರುತ್ತಾರೆ. ಲೈಂಗಿಕ ಅಲ್ಪಸಂಖ್ಯಾತರನ್ನು ಅಪರಾಧಿಗಳಾಗಿಸಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ಭಾಗಶಃ ಕಿತ್ತು ಹಾಕಲು ನಡೆದ ರಾಷ್ಟ್ರ ಮಟ್ಟದ ಹೋರಾಟದಲ್ಲಿ ಅಕ್ಕಯ್ ಅವರು ಹಾಕಿದ ಪಿಟಿಷನ್ ಭಾರತೀಯ ದಂಡ ಸಂಹಿತೆಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದು ನಿರ್ಣಾಯಕ ಪಾತ್ರ ವಹಿಸುತ್ತದೆ. ಲೈಂಗಿಕತೆ ಎನ್ನುವುದು ಸೆಕ್ಷನ್ 377ರಡಿ ನಿರೂಪಿತವಾದ ತಿಳುವಳಿಕೆ ವಸಾಹತು ಪ್ರಜ್ಞೆಯಿಂದ ಕೂಡಿದೆ ಎಂದು ಹೇಳುವ ಅಕ್ಕಯ್ ಸಂವಿಧಾನದಡಿ ದತ್ತವಾದ ಹಕ್ಕನ್ನು ಬಳಸಿ ಸುಪ್ರೀಂ ಕೊರ್ಟಿನಲ್ಲಿ ಈ ಕಾನೂನನ್ನು ಮರು ವ್ಯಾಖ್ಯಾನಿಸುವ ದಿಟ್ಟತನ ತೋರುತ್ತಾರೆ. ನ್ಯಾಯಾಲಯದ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲಾಗುತ್ತದೆ.

ಅವರಿಗಿರುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಇರುವ ಕಾಳಜಿ ಮತ್ತು ರಾಜಕೀಯದ ಸ್ಪಷ್ಟತೆ ಮೆಚ್ಚುವಂತಹದು. ಇವರ ಹಾಗೂ ಅನೇಕ ಮಾನವ ಹಕ್ಕುಗಳ ಹೋರಾಟಗಾರರ ಬಹುದೊಡ್ಡ ಹೋರಾಟದ ಫಲವಾಗಿ ಇಂದು ಅಂದರೆ 2018ರ ವಿಧಾನಸಭೆ ಚುನಾವಣೆಯ ಅವಧಿಯಲ್ಲಿ ಅಕ್ಕಯ್ ಹಾಗೂ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಭಾರತದ ಚರಿತ್ರೆಯಲ್ಲಿಯೇ ಮೊತ್ತ ಮೊದಲ ಬಾರಿಗೆ ಮತದಾನ ಮಾಡಿದರು. ಇವರು ಮಹಿಳಾ ಮತ್ತು ಮಕ್ಕಳ ಹಕ್ಕುಗಳಿಗಾಗಿಯೂ ಹೋರಾಟ ನಡೆಸಿದ್ದಾರೆ. ಇವರ ಹೋರಾಟಗಳ ಕಾರಣದಿಂದಾಗಿಯೇ ತೃತೀಯ ಲಿಂಗಿ ಅನು ಅವರಿಗೆ ಕೋರ್ಟಿನಲ್ಲಿ ಕೆಲಸ ದೊರೆಯಿತು. ಆನಂತರದಲ್ಲಿ ನಲವತ್ತು ದಿನಗಳ ಕಾಲ ಅಮೆರಿಕದ ಪ್ರವಾಸ ಕೈಗೊಳ್ಳುತ್ತಾರೆ.

ಬದುಕಿನಲ್ಲಿ ಪಡಬಾರದ ಕಷ್ಟಗಳನ್ನು ಅವಮಾನ, ನೋವುಗಳನ್ನು ಅನುಭವಿಸಿದ ಅಕ್ಕಯ್ ಹೋರಾಟದ ಹಾದಿ ಹಿಡಿದವರು. ಅನ್ಯಾಯ, ಅಸಮಾನತೆ, ಪುರುಷ ಪ್ರಾಧ್ಯಾನ್ಯತೆಯಿರುವ ಸಮಾಜದಲ್ಲಿ ತನ್ನದೇ ಆದ ಪರ್ಯಾಯಗಳನ್ನು ಹುಡುಕಿಕೊಳ್ಳತ್ತಾ ಮುನ್ನಡೆದವರು ಅಕ್ಕಯ್. ಆತ್ಮಕಥನಗಳನ್ನು ಹಲವರು ಬರೆಯುತ್ತಾರೆ. ಆದರೆ ಅಕ್ಕಯ್ ಅವರ ಆತ್ಮಕಥನ ಓದಿ ಮೂರು ದಿನ ತಲ್ಲಣಿಸಿ ಹೋಗಿದ್ದೆ. ನಾನು ಅವನಲ್ಲ ಅವಳು, ಬದುಕು ಬಯಲು ಹಾಗೂ ನಡುವೆ ಸುಳಿವ ಆತ್ಮ ಎಂಬ ಲೈಂಗಿಕ ಅಲ್ಪಸಂಖ್ಯಾತರ ಆತ್ಮಕಥನಗಳು ಈಗಾಗಲೇ ಪ್ರಕಟಗೊಂಡಿವೆ. ಆ ಆತ್ಮಕಥನಗಳು ಲೈಂಗಿಕ ಅಲ್ಪಸಂಖ್ಯಾರ ಬಗ್ಗೆ ಅನುಕಂಪ ಹುಟ್ಟಿಸುವ ಕೆಲಸ ಮಾಡುತ್ತವೆ. ಆದರೆ ಅಕ್ಕಯ್ ಅವರ ಆತ್ಮಕಥನ ಲಿಂಗತ್ವದ ಬದಲಾವಣೆಯನ್ನು ವೈಜ್ಞಾನಿಕವಾಗಿ ಗೃಹಿಸುತ್ತದೆ ಮತ್ತು ಸಮಾಜ, ಸರಕಾರ, ನ್ಯಾಯಾಲಯ, ಪೊಲೀಸರಿಗೆ ಅದು ಮನುಷ್ಯರನ್ನಾಗಿ ಮಾಡುವ ಹೋರಾಟದ ಹಾದಿ ತುಳಿಯುತ್ತದೆ. ತನ್ನ ಸ್ಪಷ್ಟವಾದ ವಿಚಾರ, ಪಾರದರ್ಶಕ ವ್ಯಕ್ತಿತ್ವಗಳ ಮೂಲಕ, ಸರಕಾರದ ಗಮನ ಸೆಳೆಯುತ್ತದೆ. ಮುಂದೆ ಅಕ್ಕಯ್‌ರವರು ರಾಜಕೀಯ ಪಕ್ಷ ಸೇರುವ ತೀರ್ಮಾನಕ್ಕೆ ಬರುತ್ತಾರೆ.

ಹೋರಾಟವೇ ಬದುಕಾಗಿರುವ ಇವರಿಗೆ ಲೋಕವೇ ಒಂದು ವಿಶ್ವವಿದ್ಯಾಲಯವಾಗುತ್ತದೆ. ಬೀದಿ ಬದಿಯ ಬದುಕಿನಲ್ಲಿ ಹಲವಾರು ಹಿಂಸೆ, ಲೈಂಗಿಕ ದೌರ್ಜನ್ಯಗಳನ್ನು ಎದುರಿಸುತ್ತಾರೆ. ಅಕ್ಕಯ್ ಅವರನ್ನು ಬೆತ್ತಲೆ ಮಾಡಿ ಹಿಂಸೆ ನೀಡಿ ಅವರ ಮೇಲೆ ಅನೇಕ ಕೇಸುಗಳನ್ನು ಜಡಿದ ಪೊಲೀಸರೇ ಇಂದು ಅವರಿಗೆ ‘‘ಎಸ್ ಮೇಡಂ’’ ಎನ್ನುವಂತಾಯಿತು. ಕರ್ನಾಟಕ ಪೊಲೀಸ್ ಅಕಾಡಮಿಯ ಪೊಲೀಸರಿಗೆ ತರಬೇತಿ ನೀಡಲು ಅಕ್ಕಯ್ ಬಂದಾಗ ತಲ್ಲಣಿಸಿ ಹೋದ ಪೊಲೀಸರು ‘‘ಸಾರಿ ಮೇಡಂ. ಅಂದಿನ ನಮ್ಮ ವರ್ತನೆಗೆ ಕ್ಷಮೆ ಇರಲಿ’’ ಎಂದು ಕೇಳುವಂತಾಯಿತಲ್ಲ, ಅದುವೆ ಅಕ್ಕಯ್ ಅವರ ಶಕ್ತಿ ಮತ್ತು ಗೆಲುವಾಗಿದೆ. ಅಕ್ಕಯ್ ಪದ್ಮಶಾಲಿಯವರು ತಮ್ಮ ಬದುಕನ್ನು ಮಾನವ ಹಕ್ಕುಗಳಿಗಾಗಿ ಸಮರ್ಪಿಸಿಕೊಂಡವರು. ಇಂದು ಅಕ್ಕಯ್ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಶಕ್ತಿಯಾಗಿದ್ದಾರೆ. ಕೊನೆಗೆ ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡಿರುತ್ತಾರೆ. ವಿಜ್ಞಾನಕ್ಕೆ ಗೊತ್ತಾಗಲಿ ಒಂದು ಗಂಡು ದೇಹದಲ್ಲಿ ಹೆಣ್ಣಿನ ಮನಸ್ಸು ಹೇಗಿರುತ್ತದೆ ಎಂದು ಅವರೂ ಅಧ್ಯಯನ ಮಾಡಲಿ ಎಂಬುದು ಅಕ್ಕಯ್ ಅವರ ಅಂಬೋಣ. ಕೊನೆಗೆ ಅವರು ಹೇಳುವುದೇನೆಂದರೆ ಇತಿಹಾಸ ನಮ್ಮೆಲ್ಲರ ಕ್ಷಮೆ ಯಾಚಿಸುವ ದಿನ ಬರಲಿದೆ ಎಂಬ ಆತ್ಮವಿಶ್ವಾಸದ ಅವರ ನುಡಿಗಳು ಹಾಗೂ ಇಡೀ ಮಾನವ ಕುಲ ಒಪ್ಪಿ ಅಪ್ಪಿಕೊಳ್ಳುವ ದಿನ ಬಂದೇ ಬರುತ್ತದೆ ಎಂಬ ಅವರ ಬೆಟ್ಟದಂತಹ ಆತ್ಮವಿಶ್ವಾಸಕ್ಕೆ ಶರಣೆಂಬೆ.

‘ಅಕ್ಕಯ್’ ಪುಸ್ತಕವನ್ನು ಬಹುರೂಪಿಯವರು ಪ್ರಕಟಿಸಿದ್ದಾರೆ.

ಪುಟ- 268, ಬೆಲೆ-300=00,

ಮೊಬೈಲ್ ನಂ.7019182729

Writer - ಡಾ.ಕೆ. ಷರೀಫಾ

contributor

Editor - ಡಾ.ಕೆ. ಷರೀಫಾ

contributor

Similar News