ನಾಗರಿಕರ ಹತ್ಯೆಯ ತನಿಖೆ: ಸಿಟ್ ವಿಸ್ತರಿಸಿದ ನಾಗಾಲ್ಯಾಂಡ್ ಸರಕಾರ
Update: 2021-12-28 17:44 GMT
ಗುವಾಹತಿ, ಡಿ. 28: ಮೊನ್ ಜಿಲ್ಲೆಯಲ್ಲಿ ಡಿಸೆಂಬರ್ 4ರಂದು ನಡೆಸಿದ ಹೊಂಚು ದಾಳಿಯ ಸಂದರ್ಭ ನಾಗರಿಕರು ಮೃತಪಟ್ಟ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು ನಾಗಾಲ್ಯಾಂಡ್ ಸರಕಾರ ವಿಸ್ತರಿಸಿದೆ. ನಾಗಾಲ್ಯಾಂಡ್ ಸರಕಾರ ಡಿಸೆಂಬರ್ 5ರಂದು ಐಜಿಪಿ ಲಿಮಾಸುನುಪ್ ಜಮೀರ್ ನೇತೃತ್ವದಲ್ಲಿ ಐವರು ಸದಸ್ಯರ ತಂಡವನ್ನು ರೂಪಿಸಿತ್ತು. ಈಗ 16ರಿಂದ 17 ಮಂದಿಯನ್ನು ತಂಡಕ್ಕೆ ಸೇರಿಸಲಾಗಿದೆ. ಇದರೊಂದಿಗೆ ತಂಡದ ಸಾಮರ್ಥ್ಯ 21-22ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸಿಟ್ ತಂಡದಲ್ಲಿ ಐವರು ಐಪಿಎಸ್ ಅಧಿಕಾರಿಗಳು ಇದ್ದಾರೆ. ಉಳಿದ ಅಧಿಕಾರಿಗಳು ಕೂಡ ಸಮರ್ಥರು ಎಂದು ಅವರು ಹೇಳಿದ್ದಾರೆ. ಸೇರ್ಪಡೆಗೊಳಿಸಲಾದ ಅಧಿಕಾರಿಗಳು ಈ ತಂಡದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಸಂದೀಪ್ ಎಂ. ತಮ್ಗಾಡ್ ಅವರು ಹೇಳಿದ್ದಾರೆ.