ಭದ್ರತಾ ಲೋಪ; ಪಂಜಾಬ್‌ ಸರ್ಕಾರವನ್ನು ಉರುಳಿಸಲು ಪ್ರಧಾನಿ ಆಡಿದ ನಾಟಕ: ಸಿಎಂ ಚರನ್‌ಜಿತ್‌ ಸಿಂಗ್‌ ಚನ್ನಿ

Update: 2022-01-07 02:14 GMT
photo: pti 

ತಾಂಡಾ: ಪ್ರಧಾನಮಂತ್ರಿಯ ಭದ್ರತಾ ಲೋಪ ಪ್ರಕರಣದ ಕುರಿತು ಪಂಜಾಬ್‌ ಸಿಎಂ ಚರನ್‌ಜಿತ್‌ ಸಿಂಗ್‌ ಚನ್ನಿ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಪಂಜಾಬ್‌ ಸರ್ಕಾರವನ್ನು ಉರುಳಿಸಲು ಮೋದಿ ಆಡಿದ ನಾಟಕವೆಂದು ಹೇಳಿದ್ದಾರೆ. 

ಪಂಜಾಬಿನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸರ್ಕಾರವನ್ನು ಉರುಳಿಸುವ ನರೇಂದ್ರ ಮೋದಿ ಅವರ ಹುನ್ನಾರವೆಂದು ಚನ್ನಿ ಈ ವಿದ್ಯಾಮಾನವನ್ನು ಕರೆದಿದ್ದಾರೆ. 

ಪ್ರಧಾನಮಂತ್ರಿ ಈ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ನಾಯಕರು. ಅವರು ಈ ರೀತಿಯ ಕಳಪೆ ರಾಜಕಾರಣಕ್ಕೆ ಇಳಿಯುವುದು ಅವರ ಸ್ಥಾನಮಾನಕ್ಕೆ ತಕ್ಕುದಾದದ್ದಲ್ಲ ಎಂದು ಅವರು ಹೇಳಿದ್ದಾರೆ. 

 ಪ್ರಧಾನಮಂತ್ರಿಗೆ ಯಾವುದೇ ಜೀವ ಬೆದರಿಕೆ ಇರಲಿಲ್ಲವೆಂದು ಕೇಂದ್ರ ಸರ್ಕಾರದ ಆರೋಪವನ್ನು ಸಾರಸಗಾಟಾಗಿ ತಳ್ಳಿ ಹಾಕಿದ ಪಂಜಾಬ್‌ ಸಿಎಂ, ಪ್ರತಿಭಟನಾಕಾರರು ಪ್ರಧಾನಿಗಿಂತ ಒಂದು ಕಿಮೀ ದೂರದಲ್ಲಿ ಇದ್ದರೆ ಪ್ರಧಾನಿ ಜೀವಕ್ಕೆ ಹೇಗೆ ಅಪಾಯಕಾರಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. 

ತಮ್ಮ ರ್ಯಾಲಿಯನ್ನು ಮೊಟಕುಗೊಳಿಸಿ ದಿಲ್ಲಿಗೆ ಮರಳಲು ಪ್ರಧಾನಿ ಮೋದಿ ಆಡಿರುವ ನಾಟಕ ಇದು ಎಂದೂ ಅವರ ಆರೋಪಿಸಿದ್ದಾರೆ. ಅದಕ್ಕೂ ಮೊದಲು ಪಂಜಾಬ್‌ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಕೂಡಾ ಹೀಗೆ ಆರೋಪಿಸಿದ್ದರು. ಪ್ರಧಾನಿ ಭಾಗವಹಿಸಬೇಕಾದ ರ್ಯಾಲಿಗೆ ಜನರೇ ಇರಲಿಲ್ಲ. ಈ ಮುಜುಗರ ತಪ್ಪಿಸಲು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಸೇರಿ ಆಡಿದ ನಾಟಕ ಇದು ಎಂದು ಹೇಳಿದ್ದರು. 
ತಮ್ಮ ರ್ಯಾಲಿಯಿಂದ ತಪ್ಪಿಸಕೊಳ್ಳಲು ಈ ರೀತಿಯ ಸುಳ್ಳು ಆರೋಪಗಳನ್ನು ಹೊರಿಸುವುದು ಜಮ್ಮು ಕಾಶ್ಮೀರದ ಗಡಿಗಳಲ್ಲಿ ದೇಶಕ್ಕಾಗಿ ಮಡಿದ ಪಂಜಾಬಿಗಳಿಗೆ ಮಾಡುವ ಅವಮಾನ. ದೇಶದ ಸಾರ್ವಭೌಮತ್ವಕ್ಕೆ, ಆರ್ಥಿಕ ಅಭಿವೃದ್ಧಿಗೆ ಪಂಜಾಬಿಗಳ ಕೊಡುಗೆ ಸಾಕಷ್ಟಿದೆ. ನಿಮ್ಮ ರಾಜಕೀಯಕ್ಕಾಗಿ ಪಂಜಾಬಿಗಳನ್ನು ಅವಮಾನಿಸುವುದನ್ನು ನೀವು ನಿಲ್ಲಿಸಬೇಕು ಎಂದು ಚನ್ನಿ ಹೇಳಿದ್ದಾರೆ. 

 ರಾಜ್ಯದಲ್ಲಿ ಸರ್ಕಾರವನ್ನು ಉರುಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಧಾನಿಯ ಹುನ್ನಾರವಿದು. ಆದರೆ ಪಂಜಾಬನ್ನು ಪ್ರೀತಿಯಿಂದ ಮಾತ್ರ ಗೆಲ್ಲಲಾಗುತ್ತದೆ, ಒತ್ತಡದಿಂದಲ್ಲ. ರಾಜ್ಯದಲ್ಲಿ ಪ್ರಜಾಸತ್ತೆಯನ್ನು ಉರುಳಿಸುವ ಯಾವ ತಂತ್ರವನ್ನೂ ಪಂಜಾಬಿಗಳು ಸಹಿಸುವುದಿಲ್ಲ ಎಂದು ಚನ್ನಿ ಪ್ರಧಾನಿ ಅವರನ್ನು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News