ಪ್ರಧಾನಿಗೆ ಭದ್ರತಾ ಲೋಪ: ಜ.10ರವರೆಗೆ ತನಿಖೆಯಿಂದ ದೂರವಿರುವಂತೆ ಪಂಜಾಬ್, ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2022-01-07 14:13 GMT

ಹೊಸದಿಲ್ಲಿ, ಜ.7: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಗೆ ಸಂಬಂಧಿಸಿದ  ಎಲ್ಲಾ ದಾಖಲೆಗಳ ಸಂಗ್ರಹಿಸುವಂತೆ ಹಾಗೂ ಸಂರಕ್ಷಿಸಿಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ ಮಹಾನೋಂದಣಿ ಅಧಿಕಾರಿಯವರಿಗೆ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಪ್ರವಾಸಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಮೊಹರು ಮಾಡಿಡುವ ಕಾರ್ಯದಲ್ಲಿ ಪಂಜಾಬ್ ಸರಕಾರ ಹಾಗೂ ಪೊಲೀಸ್ ಇಲಾಖೆಗಳು, ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಹಾಗೂ ಇತರ ಏಜೆನ್ಸಿಗಳು ಸಹಕರಿಸಬೇಕು ಹಾಗೂ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಪ್ರಧಾನಿಯವರ ಪಂಜಾಬ್ ಭೇಟಿಗೆ ಸಂಬಂಧಪಟ್ಟಂತಹ ವಯರ್‌ಲೆಸ್ ಸಂದೇಶಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಲು ಹೈಕೋರ್ಟ್ ನ ಮಹಾನೋಂದಣಿ ಅಧಿಕಾರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಓರ್ವ ಅಧಿಕಾರಿ ನೆರವಾಗಬೇಕೆಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಪ್ರಧಾನಿಯ ಪಂಜಾಬ್ ಭೇಟಿ ಸಂದರ್ಭ ಆಗಿರುವ ಭದ್ರತಾ ಲೋಪದ ಪ್ರಕರಣ ತನಿಖೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ನೇಮಕಗೊಂಡ ಸಮಿತಿಗಳು ಸೋಮವಾರದವರೆಗೆ ತನಿಖೆಯಿಂದ ದೂರವಿರಬೇಕೆಂದು ಸೂಚಿಸಿದೆ. ಸೋಮವಾರದಂದು ಪ್ರಕರಣದ ಆಲಿಕೆಯನ್ನು ತಾನು ಮತ್ತೆ ನಡೆಸುವುದಾಗಿ ಅದು ತಿಳಿಸಿದೆ.

ಅರ್ಜಿದಾರರಾದ ಹಿರಿಯ ನ್ಯಾಯವಾದಿ ಮಣೀಂದರ್ ಸಿಂಗ್ ಅವರು ತನ್ನ ವಾದವನ್ನು ಮಂಡಿಸುತ್ತಾ, ದೇಶದ ಪ್ರಧಾನಿಯ ಭದ್ರತೆಯು ಅತ್ಯಂತ ಮಹತ್ವವಾದುದಾಗಿದೆ ಹಾಗೂ ಅವರ ಸುರಕ್ಷತೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶಗಳನ್ನು ಪಂಜಾಬ್ ಸರಕಾರ ಪಾಲಿಸಿಲ್ಲವೆಂದು ದೂರಿದರು ಹಾಗೂ ಇದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದರು.

ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಘಟನೆಯು ಅಂತಾರಾಷ್ಟ್ರೀಯವಾಗಿ ಮುಜುಗರಕ್ಕೆ ಕಾರಣವಾಗಿದೆಯೆಂದರು.

‘‘ಪ್ರಧಾನಿಯವರ ವಾಹನ ವ್ಯೂಹವು ರಸ್ತೆಯಲ್ಲಿ ಪ್ರಯಾಣಿಸುವಾಗ ಪೊಲೀಸ್ ಮಹಾನಿರ್ದೇಶಕರು, ಆ ರಸ್ತೆಯ ಪರಿಶೀಲನೆಯನ್ನು ನಡೆಸುತ್ತಾರೆ. ಈ ಪ್ರಕರಣದಲ್ಲಿ ಪ್ರಧಾನಿಯವರ ರಸ್ತೆ ಪ್ರಯಾಣಕ್ಕೆ ಪೊಲೀಸ್ ಮಹಾನಿರ್ದೇಶಕರು ಹಸಿರು ನಿಶಾನೆ ತೋರಿಸಿದ್ದರು. ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಮುನ್ನ ಪ್ರಯಾಣಿಸುವಂತಹ ಪೈಲಟ್ ಕಾರಿಗೆ ಈ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಕರು ಮಾಹಿತಿ ನೀಡಿಲ್ಲವೆಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಇಂತಹ ಭದ್ರತಾ ಲೋಪವು ನಿಶ್ಚಿತವಾಗಿಯೂ ಗಡಿಯಾಚೆಗಿನ ಭಯೋತ್ಪಾದನೆಯ ಸಂಚಾಗಿರುವ ಸಾಧ್ಯತೆಯಿದೆಯೆಂದವರು ಹೇಳಿದರು.

ಪಂಜಾಬ್ ಸರಕಾರದ ಅಟಾರ್ನಿಜನರಲ್ ಡಿ.ಎಸ್. ಪಟ್ವಾಲಾ ಅವರು ಈ ಪ್ರಕರಣವನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಿಲ್ಲವೆಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು ಮತ್ತು ಘಟನೆ ನಡೆದ ದಿನದಂದೇ ಸರಕಾರವು ನಿವೃತ್ತ ನ್ಯಾಯಮೂರ್ತಿಯವರನ್ನು ಒಳಗೊಂಡ ತನಿಖಾ ಸಮಿತಿಯೊಂದನ್ನು ರಚಿಸಿದೆ ಹಾಗೂ ಎಫ್ಐಆರ್ ದಾಖಲಿಸಿದೆೆ ಎಂದವರು ಹೇಳಿದರು.

ಪ್ರಧಾನಿಯವರ ಪಂಜಾಬ್ ಭೇಟಿಗೆ ಸಂಬಂಧಿಸಿ ಪೊಲೀಸ್ ಹಾಗೂ ಭದ್ರತಾಪಡೆಗಳು ಏರ್ಪಡಿಸಿದ್ದ ಬಂದೋಬಸ್ತ್‌ಗೆ ಸಂಬಂಧಿಸಿದ ಎಲ್ಲಾ ಪುರಾವೆಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆಯೂ ಸರ್ವೋಚ್ಚ ನ್ಯಾಯಾಲಯವು ಭಟಿಂಡಾ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿತು.

ಬುಧವಾರ ಪಂಜಾಬ್ ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಾವಲು ವಾಹನಗಳೊಂದಿಗೆ  ಹುಸೈನಿವಾಲಾದ ಹುತಾತ್ಮ ಸ್ಮಾರಕವನ್ನು ಸಂದರ್ಶಿಸಲು ಪ್ರಯಾಣಿಸುತ್ತಿದ್ದಾಗ ರೈತ ಪ್ರತಿಭಟನಕಾರರು ಭಟಿಂಡಾ ಸಮೀಪದ ಫ್ಲೈಓವರ್ ಒಂದರಲ್ಲಿ ರಸ್ತೆ ತಡೆ ನಡೆಸಿದ್ದರು. ಇದರಿಂದಾಗಿ ಪ್ರಧಾನಿಯವರು 20 ನಿಮಿಷಗಳ ಫ್ಲೈಓವರ್ ನಲ್ಲಿ ಸಿಲುಕಿದ್ದರು. ಆನಂತರ ಅವರಿದ್ದ ವಾಹನ ವ್ಯೂಹವು ಮುಂದಕ್ಕೆ ಚಲಿಸಲಾಗದೆ ವಾಪಾಸಾಗಿತ್ತು. ಇದರಿಂದಾಗಿ ಫಿರೋಜ್‌ಪುರದಲ್ಲಿ ಅವರು ಪಾಲ್ಗೊಳ್ಳಲಿದ್ದ ಬಿಜೆಪಿ ರ್ಯಾಲಿಯೂ ರದ್ದಾಗಿತ್ತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News