ಸರಕಾರಿ ವಕೀಲರ ಕಾರ್ಯಕ್ಷಮತೆಯ ಬಗ್ಗೆ ತೀವ್ರ ಆಕ್ಷೇಪ

Update: 2022-01-10 02:28 GMT
photo: pti 

► ಸರಕಾರಿ ವಕೀಲರಿಗೆ ಮೂರು ವರ್ಷಗಳಲ್ಲಿ 44. 83 ಕೋಟಿ ರೂ. ಸಂಭಾವನೆ ಪಾವತಿ

ಬೆಂಗಳೂರು, ಜ.9: ಜಿಲ್ಲಾ, ತಾಲೂಕು ಮತ್ತು ಉಚ್ಚ ನ್ಯಾಯಾಲಯಗಳಿಗೆ ನೇಮಕವಾಗಿರುವ ಸರಕಾರಿ ವಕೀಲರು, ಅಪರ ವಕೀಲರಿಗೆ ಕಳೆದ 3 ವರ್ಷಗಳಲ್ಲಿ ಸಂಬಳ, ಸಾರಿಗೆ ಮತ್ತು ಪ್ರಕರಣಗಳನ್ನು ನಡೆಸಿಕೊಟ್ಟ ಸಂಭಾವನೆ ರೂಪದಲ್ಲಿ ಒಟ್ಟಾರೆ 44.83 ಕೋಟಿ ರೂ. ಪಾವತಿಸಿದ್ದರೂ ಸರಕಾರದ ಪರವಾಗಿ ತೀರ್ಪುಗಳು ಕಡಿಮೆ ಸಂಖ್ಯೆಯಲ್ಲಿ ಬಂದಿರುವುದು ಇದೀಗ ಬಹಿರಂಗವಾಗಿದೆ.

ಹೈಕೋರ್ಟ್‌ವೊಂದರಲ್ಲೇ ಕಳೆದ ಮೂರು ವರ್ಷಳಲ್ಲಿ ಭೂ ವ್ಯಾಜ್ಯಗಳೂ ಸೇರಿದಂತೆ 1,23,083 ಪ್ರಕರಣಗಳ ಪೈಕಿ 44,749 ಆದೇಶಗಳು ಸರಕಾರದ ವಿರುದ್ಧವಾಗಿ ಪ್ರಕಟಗೊಂಡಿದ್ದರೆ 50,905 ಆದೇಶಗಳಷ್ಟೇ ಸರಕಾರದ ಪರವಾಗಿ ಬಂದಿವೆ. ಅದೇ ರೀತಿ ಕ ೆದ ಮೂರು ವರ್ಷಗಳಲ್ಲಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,50,257 ಆದೇಶಗಳು ಸರಕಾರದ ವಿರುದ್ಧವಾಗಿ ಬಂದಿವೆ. ಸರಕಾರದ ಪರವಾಗಿ ಕೇವಲ 21,092 ಆದೇಶಗಳು ಬಂದಿವೆ. ಹೈಕೋರ್ಟ್, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 1.95 ಲಕ್ಷ ಆದೇಶಗಳು ಸರಕಾರದ ವಿರುದ್ಧ ಬಂದಿವೆ.

ಸರಕಾರಿ ವಕೀಲರು ನ್ಯಾಯಾಲಯಗಳಲ್ಲಿ ಸರಕಾರದ ಪರವಾಗಿ ಸರಿಯಾಗಿ ವಾದಗಳನ್ನು ಮಂಡಿಸುತ್ತಿಲ್ಲ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಸರಕಾರಿ ವಕೀಲರ ಕಾರ್ಯಕ್ಷಮತೆಯು ಮುನ್ನೆಲೆಗೆ ಬಂದಿದೆ. ಸರಕಾರದ ವಿರುದ್ಧವಾಗಿ ಬರುತ್ತಿರುವ ಆದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದ್ದರೂ ವಕೀಲರ ಕಾರ್ಯಕ್ಷಮತೆ ಕುರಿತು ಸರಕಾರವು ಇದುವರೆಗೂ ಗಂಭೀರವಾಗಿ ಪರಿಶೀಲಿಸಿಲ್ಲ.

ಜಿಲ್ಲಾ, ತಾಲೂಕು ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಸರಕಾರಿ ವಕೀಲರಿಗೆ ಪಾವತಿಸಿರುವ ಸಂಬಳ, ಸಾರಿಗೆ ಮತ್ತು ಸಂಭಾವನೆ ವೆಚ್ಚದ ಮಾಹಿತಿ ‘the-file.in’ಗೆ ಲಭ್ಯವಾಗಿದೆ. ಅಲ್ಲದೆ 2021ರ ಡಿಸೆಂಬರ್ 21ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಈ ಬಗ್ಗೆ ಲಿಖಿತ ಉತ್ತರವನ್ನು ಒದಗಿಸಿದ್ದಾರೆ.

ಸರಕಾರಿ ವಕೀಲರಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ನ್ಯಾಯಾಲಯದ ಮುಂದೆ ಸರಕಾರದ ಪರವಾಗಿ ಸರಿಯಾದ ರೀತಿಯಲ್ಲಿ ವಾದಗಳನ್ನು ಮಂಡಿಸುತ್ತಿಲ್ಲ ಎಂದು ರಾಜ್ಯದ ಹಲವು ಜಿಲ್ಲಾಧಿಕಾರಿಗಳು ಸರಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ. ಆದರೆ ಸಚಿವ ಮಾಧುಸ್ವಾಮಿ ಅವರು ರಾಜ್ಯದ ಅಡ್ಟೋಕೇಟ್ ಜನರಲ್ ಅವರೊಂದಿಗೆ ಸಭೆಯನ್ನೇ ನಡೆಸಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 2018ರಲ್ಲಿ ದಾಖಲಾಗಿದ್ದ ಒಟ್ಟು ಪ್ರಕರಣಗಳ ಪೈಕಿ ಸರಕಾರದ ವಿರುದ್ಧ 44,383 ಆದೇಶಗಳು ಸರಕಾರದ ವಿರುದ್ಧವಾಗಿದ್ದರೆ ಇದೇ ವರ್ಷದಲ್ಲಿ ಸರಕಾರದ ಪರವಾಗಿ ಕೇವಲ 5,328 ಆದೇಶಗಳು ಬಂದಿವೆ. ಹಾಗೆಯೇ 2019ರಲ್ಲಿ 45,992 ಆದೇಶಗಳು ಸರಕಾರದ ವಿರುದ್ಧವಾಗಿದ್ದರೆ 6,504 ಆದೇಶಗಳು ಸರಕಾರದ ಪರವಾಗಿವೆ. 2020ರಲ್ಲಿ 59,952 ತೀರ್ಪುಗಳು ಸರಕಾರದ ವಿರುದ್ಧವಾಗಿದ್ದರೆ ಸರಕಾರದ ಪರವಾಗಿ ಕೇವಲ 9,260 ಆದೆೀಶಗಳು ಬಂದಿರುವುದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ತವರು ಜಿಲ್ಲೆ ತುಮಕೂರಿನಲ್ಲಿ 2018ರಲ್ಲಿ 1,618, 2019ರಲ್ಲಿ 1,312, 2,035 ಸೇರಿ ಒಟ್ಟಾರೆ 4,965 ಆದೇಶಗಳು ಸರಕಾರದ ವಿರುದ್ಧವಾಗಿ ಬಂದಿವೆ. ವಿಶೇಷವೆಂದರೆ ಈ ಮೂರು ವರ್ಷಗಳಲ್ಲಿ ಸರಕಾರದ ಪರವಾಗಿ ಒಂದೇ ಒಂದು ತೀರ್ಪು ಬಂದಿಲ್ಲ.

ಬಾಗಲಕೋಟೆಯಲ್ಲಿ 2018ರಲ್ಲಿ ಸರಕಾರದ ವಿರುದ್ಧ 4,601, 2019ರಲ್ಲಿ 5,827, 2020ರಲ್ಲಿ 7,891 ಸೇರಿ ಒಟ್ಟಾರೆ 18,319 ಆದೇಶಗಳು ಸರಕಾರದ ವಿರುದ್ಧವಾಗಿ ಬಂದಿವೆ. ಇದು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 2018ರಲ್ಲಿ 5,028, 2019ರಲ್ಲಿ 5,313, 2020ರಲ್ಲಿ 1,568 ಸೇರಿ ಒಟ್ಟಾರೆ 11,909 ಅದೇಶಗಳು ಸರಕಾರದ ವಿರುದ್ಧವಾಗಿ ಬಂದಿವೆ. 2018ರಲ್ಲಿ ಸರಕಾರದ ಪರ 5,328, 2019ರಲ್ಲಿ 6,504, 2020ರಲ್ಲಿ 9,260 ಸೇರಿ ಒಟ್ಟಾರೆ 21,092 ಆದೇಶಗಳಷ್ಟೇ ಸರಕಾರದ ಪರವಾಗಿ ಬಂದಿವೆ.

 ಕಳೆದ 3 ವರ್ಷಗಳಲ್ಲಿ ಸರಕಾರಿ ವಕೀಲರು ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು 1,23,083 ಪ್ರಕರಣಗಳನ್ನು ಪ್ರತಿನಿಧಿಸಿದ್ದರು. ಈ ಪೈಕಿ ಸರಕಾರದ ಪರವಾಗಿ 50,905 ಮತ್ತು ಸರಕಾರದ ವಿರುದ್ಧವಾಗಿ 44,749 ಪ್ರಕರಣಗಳಲ್ಲಿ ಆದೇಶ- ತೀರ್ಪು ಬಂದಿದೆ.

 ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ವಕೀಲರುಗಳಿಗೆ ಒಟ್ಟು 16.41 ಕೋಟಿ ರೂ. ಸಂಬಳ ನೀಡಲಾಗಿದೆ. 2018-19ರಲ್ಲಿ 5,45,87,351 ಕೋಟಿ ರೂ., 2019-20ರಲ್ಲಿ 5,57,80,094 ರೂ., 2020-21ರಲ್ಲಿ 5,44,36,883 ರೂ. ಸಂಬಳ ಪಾವತಿಸಲಾಗಿದೆ.

  ಇದಲ್ಲದೆ ಸಾರಿಗೆ ವೆಚ್ಚವೆಂದು ಕಳೆದ 3 ವರ್ಷಗಳಲ್ಲಿ ಒಟ್ಟು 34,90,299 ರೂ. ಪಾವತಿಸಲಾಗಿದೆ. 2018-19ರಲ್ಲಿ 22,59,887 ರೂ., 2019-20ರಲ್ಲಿ 10,51,382 ರೂ., 2020-21ರಲ್ಲಿ 1,79,030 ರೂ. ನೀಡಲಾಗಿದೆ. ಹಾಗೆಯೇ ಕೇಸುಗಳನ್ನು ನಡೆಸಿಕೊಟ್ಟಿರುವ ವಕೀಲರುಗಳಿಗೆ ಕಳೆದ 3 ವರ್ಷಗಳಲ್ಲಿ ಒಟ್ಟು 14.38 ಕೋಟಿ ರೂ. ಸಂಭಾವನೆ ಪಾವತಿಸಲಾಗಿದೆ.

ಕಳೆದ 3 ವರ್ಷಗಳಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ವಕೀಲರಿಗೆ 10.18 ಕೋಟಿ ರೂ. ಮತ್ತು ಹೆಚ್ಚಿನ ಸಂಭಾವನೆಯಾಗಿ 4.61 ಕೋಟಿ ರೂ. ಪಾವತಿಸಿರುವುದು ತಿಳಿದು ಬಂದಿದೆ.

 ಸರಕಾರಿ ವಕೀಲರುಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ನ್ಯಾಯಾಲಯದ ಮುಂದೆ ಸರಕಾರದ ಪರವಾಗಿ ಸರಿಯಾದ ರೀತಿ ವಾದಗಳನ್ನು ಮಂಡಿಸುತ್ತಿಲ್ಲವೆನ್ನವು ಅಂಶವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿದ್ದರೆ, ಹೈಕೋರ್ಟ್‌ನಲ್ಲಿ ಸರಕಾರಿ ವಕೀಲರು ಸರಕಾರದ ಪರವಾಗಿ ಸರಿಯಾದ ರೀತಿಯಲ್ಲಿ ವಾದ ಮಂಡಿಸುತ್ತಿಲ್ಲ ಎಂಬುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಉತ್ತರಿಸಿದ್ದಾರೆ.

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮದನ್ವಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಸರಕಾರದ ಪ್ರಕರಣಗಳನ್ನು ನಡೆಸಲು ಸರಕಾರಿ ವಕೀಲರನ್ನು ನೇಮಕ ಮಾಡುವಾಗ ವಕೀಲರುಗಳ ಅನುಭವ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ನ್ಯಾಯಾಧೀಶರು ನೀಡುವ ಅಭಿಪ್ರಾಯ ಮತ್ತು ಹೈಕೋರ್ಟ್‌ಗೆ ನೇಮಕ ಮಾಡುವಾಗ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ವಕೀಲರನ್ನು ನೇಮಿಸಲಾಗುತ್ತಿದೆ.

ಅಡ್ವೋಕೇಟ್ ಜನರಲ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ನೇಮಕ ಪ್ರಕ್ರಿಯೆ ನಡೆದಿದ್ದರೂ ನ್ಯಾಯಾಲಯಗಳಲ್ಲಿ ವಿಚಾರಣೆ ಸಂದರ್ಭಗಳಲ್ಲಿ ಸರಿಯಾಗಿ ಮತ್ತು ಪೂರಕ ಸಾಕ್ಷ, ಪುರಾವೆಗಳ ಸಮೇತ ವಾದ ಮಂಡಿಸಬೇಕಿದ್ದ ಸರಕಾರಿ ವಕೀಲರುಗಳು ಪ್ರಕರಣಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂಬ ಬಲವಾದ ಆರೋಪಗಳೂ ಇವೆ.

ವಿಧಾನಮಂಡಲದ ಅರ್ಜಿ ಸಮಿತಿಯೂ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳು ಸರಕಾರಿ ವಕೀಲರುಗಳ ಕಾರ್ಯಕ್ಷಮತೆ ಕುರಿತು ಎಲ್ಲಾ ಇಲಾಖೆಗಳ ಹಲವು ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ವಕೀಲರ ಕಳಪೆ ವಾದದ ಕುರಿತು ಮಾಹಿತಿ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News