ಕಳವು ಪ್ರಕರಣ : ಆರೋಪಿ ಸೆರೆ

Update: 2022-01-11 14:54 GMT

ಪುತ್ತೂರು: ತಿಂಗಳ ಹಿಂದೆ ಪುತ್ತೂರು ನಗರದ ಎಪಿಎಂಸಿ ರಸ್ತೆಯ ಬಳಿ ನಿಲ್ಲಿಸಲಾಗಿದ್ದ ಎರಡು ಆಟೋ ರಿಕ್ಷಾಗಳಿಂದ ಹಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ ಮಹಮ್ಮದ್ ಸಾಲಿಕ್  ಬಂಧಿತ ಆರೋಪಿ. ಆತನನ್ನು ಜ.10ರಂದು ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.

ನಿಲ್ಲಿಸಿದ್ದ ಆಟೋ ರಿಕ್ಷಾದಿಂದ ರೂ. 9400 ಕಳವಾಗಿತ್ತು. ಡಿ.31ರಂದು ಎಪಿಎಂಸಿ ರಸ್ತೆ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನ ಆಟೋ ರಿಕ್ಷಾ ದುರಸ್ಥಿ ಕೇಂದ್ರದ ಬಳಿ ನಿಲ್ಲಿಸಲಾಗಿದ್ದ ರಿಕ್ಷಾದಿಂದ ರೂ. 14600 ಕಳವಾಗಿತ್ತು. ಈ ಎರಡು ಕೃತ್ಯವು ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. 

ಕಳವಿಗೆ ಸಂಬಂಧಿಸಿ ಏಳ್ಮುಡಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ರಾಕೇಶ್ ರೈ ಪರ್ಪುಂಜ ಮತ್ತು ಕ್ರಿಸ್ತೋಫರ್ ಬಿಲ್ಡಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ಚಿರಂಜೀವಿ ಬೆಳ್ಳಾರೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ನಸ್ರಿನಾತಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News